Mysore
26
broken clouds

Social Media

ಮಂಗಳವಾರ, 16 ಜೂನ್ 2026
Light
Dark

ಕೈಕೊಟ್ಟ ಮಳೆ; ಬಾಡಿದ ಸೂರ್ಯಕಾಂತಿ ಬೆಳೆ

ಮಹೇಂದ್ರ ಹಸಗೂಲಿ

ನಷ್ಟ ಹೊಂದಿದ ರೈತರಿಗೆ ಬೆಳೆ ವಿಮೆ ನೋಂದಣಿ ಜೊತೆಗೆ ಎಕರೆಗೆ ೫೦ ಸಾವಿರ ರೂ. ಪರಿಹಾರ ಭರಿಸಲು ಒತ್ತಾಯ

ಗುಂಡ್ಲುಪೇಟೆ: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆ ಸಮರ್ಪಕ ಮಳೆಯಾಗದ ಕಾರಣ ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ಹಂಗಳ, ತೆರಕಣಾಂಬಿ, ಬೇಗೂರು, ಕಸಬಾ ಹೋಬಳಿಗಳ ಹಲವು ಗ್ರಾಮಗಳಲ್ಲಿ ಸುಮಾರು ೧೦ ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬೆಳೆ ಬಿತ್ತನೆಯಾಗಿದ್ದು, ಇದರಲ್ಲಿ ಹಂಗಳ ಹೋಬಳಿ ಭಾಗದ ಬಾಚಹಳ್ಳಿಯಿಂದ ಗೋಪಾಲಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಸದ್ಯದ ಸ್ಥಿತಿಯಲ್ಲಿ ಸೂರ್ಯಕಾಂತಿ ಬೆಳೆ ಉತ್ತಮ ಸ್ಥಿತಿಯಲ್ಲಿದೆ. ಆದರೆ ಬೇಗೂರು, ತೆರಕಣಾಂಬಿ ಕಸಬಾ ಹೋಬಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅದರಲ್ಲೂ ಬೇಗೂರು ಹೋಬಳಿ ಕಡೆ ಮಳೆಯ ಪ್ರಮಾಣ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಬೆಳೆ ಒಣಗುತ್ತಿದೆ.

ಮಳೆ ಆಶ್ರಿತ ರೈತರು ಒಂದು ಪ್ಯಾಕೆಟ್ ಸೂರ್ಯಕಾಂತಿ ಬೀಜಕ್ಕೆ ೧,೭೪೦ ರೂ. ನೀಡಿ ಖರೀದಿಸಿ ಬಿತ್ತನೆ ಮಾಡಿದ್ದು, ಸೂರ್ಯಕಾಂತಿ ಮೊಳಕೆ ಒಡೆದು ಪೈರು ಹೊರ ಬರುತ್ತಿದ್ದಂತೆ ಮಳೆ ಕೈಕೊಟ್ಟ ಪರಿಣಾಮ ಬೆಳೆ ಬಾಡುತ್ತಿದೆ. ಇನ್ನೆರಡು ದಿನಗಳಲ್ಲಿ ಮಳೆ ಬಾರದಿದ್ದರೆ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ. ಸರ್ಕಾರ ನಷ್ಟ ಹೊಂದಿದ ರೈತರಿಗೆ ಎಕರೆಗೆ ೫೦ ಸಾವಿರ ರೂ.ನಂತೆ ಪರಿಹಾರ ನೀಡಬೇಕು. ಜೊತೆಗೆ ಬೆಳೆ ವಿಮೆ ಕಟ್ಟಿಸಿಕೊಂಡು ಈ ವರ್ಷದ ಮಳೆಯ ಪ್ರಮಾಣವನ್ನು ಪರಿಗಣಿಸಿ ಕಂದಾಯ ಇಲಾಖೆ ಮೂಲಕ ಸರ್ವೆ ನಡೆಸಿ ಅಗಸ್ಟ್ ತಿಂಗಳಿನಲ್ಲಿ ವರದಿ ಸಲ್ಲಿಸಿ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಎಂಬ ಒತ್ತಾಯ ರೈತರಿಂದ ಕೇಳಿ ಬಂದಿದೆ.

ರೈತ ಒಂದು ಎಕರೆಗೆ ಬಿತ್ತನೆ ಬೀಜ, ಗೊಬ್ಬರ, ಮತ್ತಿತರ ಪರಿಕರಗಳಿಗೆ ೧೦ ಸಾವಿರ ರೂ.ವರೆಗೂ ಬಂಡವಾಳ ಹಾಕಿದ್ದು, ಈಗ ನಷ್ಟ ಹೊಂದುವ ಭೀತಿಯಲ್ಲಿದ್ದಾರೆ. ಒಣ ಬೇಸಾಯ ಮಾಡುವ ಸಣ್ಣ ಹಿಡುವಳಿ ರೈತರ ಪರಿಸ್ಥಿತಿ ದುಸ್ಥಿತಿಯಲ್ಲಿದೆ. ಮಳೆ ಆಶ್ರಿತ ಬೇಸಾಯ ಮಾಡುವ ರೈತರಿಗೆ ಸರ್ಕಾರ ವಿಮೆ ಕಟ್ಟಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

” ತಾಲ್ಲೂಕಿನಲ್ಲಿ ಹತ್ತು ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆಯಾಗಿದೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸೂರ್ಯಕಾಂತಿಗೆ ಬೆಳೆ ವಿಮೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಆದೇಶ ಬಂದರೆ ಜೂ.೩೦ರವರೆಗೂ ನೋಂದಣಿ ಮಾಡಿಸಲು ಅವಕಾಶ ಸಿಗಲಿದೆ. ಬೆಳೆ ವಿಮೆ ಮೂಲಕ ನಷ್ಟಕ್ಕೆ ಪರಿಹಾರ ಸಿಗಲಿದೆ.”

-ಶಶಿಧರ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

“ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕುಂಠಿತವಾಗಿದ್ದು, ಸೂರ್ಯಕಾಂತಿ ಬೆಳೆ ಒಣಗುತ್ತಿದೆ. ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಕೃಷಿ ಇಲಾಖೆ ರೈತರಿಗೆ ಅನುಕೂಲವಾಗುವಂತೆ ಬೆಳೆ ವಿಮೆ ಮಾಡಿಸಿ ನಷ್ಟ ಹೊಂದಿರುವ ರೈತರ ಜೊತೆ ನಿಲ್ಲಬೇಕು.”

-ಬಸವಣ್ಣ, ಕೊಡಸೋಗೆ, ಪ್ರಗತಿಪರ ರೈತ

” ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಬೆಳೆ ವಿಮೆ ಮಾಡುವುದರಿರಲಿ, ಅದರಲ್ಲಿ ಹಿಂದಿನ ಏಳು ವರ್ಷಗಳ ಸರ್ವೆ ಆಧರಿಸಿ ವಿಮೆ ನಿರ್ಧರಿಸಲಾಗುತ್ತದೆ. ಇದು ಸರಿಯಲ್ಲ. ಸದ್ಯ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಕುಸಿತದಿಂದ ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು. ವ್ಯವಸಾಯದ ವೆಚ್ಚ ಹೆಚ್ಚಳವಾದ್ದರಿಂದ ಸೂರ್ಯಕಾಂತಿ ಬೆಳೆಗೆ ಪರಿಹಾರ ಪ್ರತಿ ಎಕರೆಗೆ ೫೦ ಸಾವಿರ ರೂ.ಗಳನ್ನು ಸರ್ಕಾರವೇ ತುಂಬಿಕೊಡಬೇಕು.”

-ಮಹದೇವಪ್ಪ, ರೈತ ಮುಖಂಡ, ಶಿವಪುರ

 

 

Tags:
error: Content is protected !!