Mysore
21
broken clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಹೆಚ್ಚುತ್ತಿರುವ ಯುವತಿಯರ ಆತ್ಮಹತ್ಯೆ ; ಯುವತಿಯರಿಗೆ ಕಂಗನಾ ರಣಾವತ್ ಕಿವಿಮಾತು

ದೆಹಲಿ : ಮದುವೆಯಾದ ಯುವತಿಯರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಯುವತಿಯರಿಗೆ ಸಲಹೆಯೊಂದನ್ನ ನೀಡಿದ್ದಾರೆ. ಮದುವೆಗಿಂತ ಮೊದಲು ತಮ್ಮ ವೃತ್ತಿ ಮತ್ತು ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡಬೇಕು ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವುದು ಭಾರಿ ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಯುವತಿಯರ ಸಾವಿನ ಪ್ರಕರಣಗಳು ದೇಶದಾದ್ಯಂತ ಆತಂಕ ಮೂಡಿಸುತ್ತಿವೆ. ಭೋಪಾಲ್‌ನಲ್ಲಿ 33 ವರ್ಷದ ತ್ವಿಶಾ ಶರ್ಮಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಮತ್ತು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 25 ವರ್ಷದ ದೀಪಿಕಾ ನಾಗರ್ ಸಾವಿನ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರಿಗೆ ಮಹತ್ವದ ಸಲಹೆ ನೀಡಿದ್ದಾರೆ.

ಪ್ರತಿದಿನ ಮದುವೆಯಾದ ಯುವತಿಯರ ಸಾವಿನ ಸುದ್ದಿಗಳು ಕೇಳಿಬರುತ್ತಿವೆ. ಮಹಿಳೆಯರು ಸಂಕಷ್ಟದ ಪರಿಸ್ಥಿತಿಯಿಂದ ಹೊರಬರಲು ಪೋಷಕರ ಬಳಿ ಸಹಾಯ ಕೇಳುತ್ತಾರೆ. ಆದರೆ ಮದುವೆಯಾದ ನಂತರ ಮಗಳನ್ನು ಕಡೆಗಣಿಸುವ ಪ್ರವೃತ್ತಿ ಭಾರತೀಯ ಸಮಾಜದಲ್ಲಿ ಇನ್ನೂ ಇದೆ ಎಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಬರೆದಿದ್ದಾರೆ.

ಯುವತಿಯರಿಗೆ ನನ್ನ ಸಲಹೆ ಏನೆಂದರೆ, ನಿಮ್ಮ ಜೀವನದಲ್ಲಿ ನಿಮ್ಮ ವೃತ್ತಿಯೇ ಅತ್ಯಂತ ಮುಖ್ಯ. ಆರ್ಥಿಕವಾಗಿ ಸ್ವತಂತ್ರರಾದ ನಂತರವೇ ಮದುವೆಯ ಬಗ್ಗೆ ಯೋಚಿಸಿ. ನಿಮ್ಮ ಜೀವನದ ಹೀರೋ ನೀವೇ ಆಗಬೇಕು. ನಿಮ್ಮನ್ನು ರಕ್ಷಿಸಲು ಬೇರೆ ಯಾರೂ ಬರುವುದಿಲ್ಲ. ನೀವು ಏನು ಮಾಡುತ್ತೀರಿ, ನೀವು ಯಾರು ಎಂಬುದು, ಯಾರನ್ನು ಮದುವೆಯಾಗುತ್ತೀರಿ ಎಂಬುದಕ್ಕಿಂತ ಹೆಚ್ಚು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಕಂಗನಾ ಈ ರೀತಿಯ ಸ್ಟೋರಿ ಹಂಚಿಕೊಳ್ಳಲು ಇತ್ತೀಚೆಗೆ ಭೋಪಾಲ್ ಮತ್ತು ಗ್ರೇಟರ್ ನೋಯ್ಡಾದಲ್ಲಿ ನಡೆದ ಗೃಹಿಣಿಯರ ಸಾವಿನ ಪ್ರಕರಣಗಳೇ ನೇರ ಕಾರಣಗಳಾಗಿವೆ. ಮಹಿಳೆಯರು ಮದುವೆಯ ಬಳಿಕ ಎದುರಿಸುವ ಕಿರುಕುಳದ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂಬ ಉದ್ದೇಶದಿಂದ ಕಂಗನಾ ಈ ಕಿವಿಮಾತು ಹೇಳಿದ್ದಾರೆ.

ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿ ಮೇ 12ರಂದು ತ್ವಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣದಲ್ಲಿ ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ಗ್ರೇಟರ್ ನೋಯ್ಡಾದ ದೀಪಿಕಾ ನಾಗರ್ ಮದುವೆಯಾದ ಬಳಿಕ ನಿರಂತರ ವರದಕ್ಷಿಣೆ ಕಿರುಕುಳ ಅನುಭವಿಸುತ್ತಿದ್ದರು ಎನ್ನಲಾಗಿದೆ. ದೀಪಿಕಾ ಮೂರು ಮಹಡಿ ಮನೆಯ ಮೇಲ್ಛಾವಣಿಯಿಂದ ಬಿದ್ದು ಸಾವನ್ನಪ್ಪಿದ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:
error: Content is protected !!