Mysore
32
scattered clouds

Social Media

ಸೋಮವಾರ, 30 ಮಾರ್ಚ್ 2026
Light
Dark

ರಾಮಕೃಷ್ಣನಗರ ಉದ್ಯಾನ: ಸಂಪೂರ್ಣ ಅಧ್ವಾನ!  

ಕೆ.ಪಿ.ಮದನ್

ಮೈಸೂರು: ಬಾಗಿಲಿಗೆ ಬೀಗವಿಲ್ಲದೆ ವರ್ಷ ಪೂರ್ತಿ ತೆರೆದೇ ಇರುವ ಉದ್ಯಾನ.., ನೀರಿಲ್ಲದೆ ನಲುಗುತ್ತಿರುವ ಸಸಿಗಳು.., ಹಸಿರು ಕಂಡು ಪಾರ್ಕ್‌ಗೆ ನುಗ್ಗಿ ಮೇಯುವ ದನಗಳು… ಇವು ರಾಮಕೃಷ್ಣನಗರದಲ್ಲಿರುವ ಪಾರ್ಕ್‌ನ ದುಸ್ಥಿತಿಯ ದೃಶ್ಯಗಳು. ರಾಮಕೃಷ್ಣನಗರದ ಹೆಚ್ ಬ್ಲಾಕ್ ೭ನೇ ಮೇನ್‌ನಲ್ಲಿರುವ ಪಾರ್ಕ್ ಅಭಿವೃದ್ಧಿ ಕಾಣದೆ ಹಾಳು ಕೊಂಪೆಯಂತಾಗಿದೆ. ರಾತ್ರಿ ಸಮಯದಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಉದ್ಯಾನವು ಸರಿಯಾದ ನಿರ್ವಹಣೆ ಇಲ್ಲದೆ ಕಸ ಸುರಿಯುವ ಸ್ಥಳವಾಗಿದೆ. ಪಾರ್ಕ್‌ನಲ್ಲಿ ಬಿಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ತೆರಳುವ ಸಾರ್ವಜನಿಕರು ಹಾಗೂ ಆಟವಾಡಲು ಬರುವ ಮಕ್ಕಳಿಗೆ ತೊಂದರೆಯಾಗುತ್ತಿದೆ.

ಒಂದೆಡೆ ನಿವಾಸಿಗಳು ಪ್ರತಿನಿತ್ಯ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಇಲ್ಲಿ ಸುರಿಯುತ್ತಿದ್ದರೆ, ಮತ್ತೊಂದೆಡೆ ನಗರ ಸ್ವಚ್ಛ ಮಾಡುವ ಪೌರಕಾರ್ಮಿಕರು ಉದ್ಯಾನದಲ್ಲಿ ಸುರಿದ ಕಸ ತೆಗೆಯಲು ಮುಂದಾಗುತ್ತಿಲ್ಲ. ಇದರಿಂದಾಗಿ ಪಾರ್ಕ್‌ನ ಪರಿಸರ ಕೆಡಲು ಪ್ರಮುಖ ಕಾರಣವಾಗಿದೆ. ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು: ರಾತ್ರಿ ವೇಳೆ ಪಾರ್ಕ್‌ನಲ್ಲಿ ಸ್ಟ್ರೀಟ್ ಲೈಟ್ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಮದ್ಯ ವ್ಯಸನಿಗಳು ಕುಡಿದ ಬಾಟಲಿಗಳನ್ನು ಪಾರ್ಕ್‌ನಲ್ಲಿ ಬೀಸಾಡಿದ್ದಾರೆ. ಕೆಲವರಂತೂ ಬಾಟಿಲಿಗಳನ್ನು ಒಡೆದು ಹಾಕಿದ್ದಾರೆ. ಇದರಿಂದ ಗಾಜುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರಿಂದ ವಾಯುವಿಹಾರಿಗಳಿಗೆ ಸಮಸ್ಯೆಯಾಗಿದೆ.

ಕಸದ ರಾಶಿ: ಪಾರ್ಕ್‌ಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಕಟ್ಟಡ ತ್ಯಾಜ್ಯ, ಗೃಹ ತ್ಯಾಜ್ಯಗಳನ್ನು ತಂದು ಬಿಸಾಡಲಾಗುತ್ತಿದ್ದು, ಕಸದ ರಾಶಿಯೇ ತಲೆ ಎತ್ತಿದೆ. ಇದರಿಂದ ಅಕ್ಕಪಕ್ಕದ ಮನೆಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪ್ರತಿದಿನ ಪೌರಕಾರ್ಮಿಕರು ಬಂದು ಕಸ ತೆಗೆದರೂ ಮತ್ತೆ ಸಾರ್ವಜನಿಕರು ಕಸವನ್ನು ಸುರಿಯುತ್ತಿದ್ದಾರೆ ಎಂದು ಸ್ಥಳೀಯರು ದೂರುತ್ತಾರೆ.

ಪಾರ್ಕ್‌ನ ಅಭಿವೃದ್ಧಿ ಇಲ್ಲ: ಪಾರ್ಕ್‌ಗೆ ಪ್ರತಿನಿತ್ಯ ನೂರಾರು ಜನರು ವಾಯುವಿಹಾರಕ್ಕೆ ಆಗಮಿಸುತ್ತಾರೆ. ಆದರೆ, ಪಾರ್ಕ್‌ನಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಮಕ್ಕಳಿಗೆ ಆಟವಾಡಲು ಉದ್ಯಾನವನ, ಶೌಚಾಲಯ, ಜಿಮ್ ಸಲಕರಣೆಗಳು, ವಾಕಿಂಗ್ ಪಾಥ್‌ನ ನಿರ್ವಹಣೆ ಮಾಡಿಕೊಟ್ಟರೆ ಹೆಚ್ಚು ಅನುಕೂಲವಾಗಲಿದೆ.

ಸ್ಥಳೀಯರಿಂದ ಗಿಡಗಳ ಪೋಷಣೆ:  ಮೈಸೂರಿನ ರಾಮಕೃಷ್ಣನಗರದ ಉದ್ಯಾನವನದಲ್ಲಿ ಸ್ಥಳೀಯ ಪ್ರಜ್ಞಾವಂತ ನಾಗರಿಕರು ವಿವಿಧ ಸಸಿಗಳನ್ನು ನೆಟ್ಟು ಪ್ರತಿನಿತ್ಯ ಗಿಡಗಳಿಗೆ ನೀರು ಹಾಕಿ ಸಂರಕ್ಷಣೆ ಮಾಡುತ್ತಿದ್ದಾರೆ.

” ಉದ್ಯಾನವನದ ಸೂಕ್ತ ನಿರ್ವಹಣೆ ಇಲ್ಲದೆ ರಾತ್ರಿ ಸಮಯದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕೂಡಲೇ ಗಮನವರಿಸಬೇಕು. ಪಾರ್ಕ್‌ನ ಸೂಕ್ತ ನಿರ್ವಹಣೆ ಮಾಡಬೇಕು.”

-ರವೀಂದ್ರ ಜೋಶಿ, ಸ್ಥಳೀಯರು

 

 

Tags:
error: Content is protected !!