Mysore
34
scattered clouds

Social Media

ಶನಿವಾರ, 21 ಮಾರ್ಚ್ 2026
Light
Dark

ಯುಗಾದಿ; ಹೊನ್ನೇರು ಕಟ್ಟಿ ಸಂಭ್ರಮಿಸಿದ ರೈತರು

ಭೇರ್ಯ ಮಹೇಶ್

ಕೆ.ಆರ್.ನಗರ: ಯುಗಾದಿ ಹಬ್ಬದ ಅಂಗವಾಗಿ ಕೆ.ಆರ್.ನಗರ ಮತ್ತು ಸಾಲಿ ಗ್ರಾಮ ಅವಳಿ ತಾಲ್ಲೂಕುಗಳ ಹಲವೆಡೆ ರೈತರು ಸಂಭ್ರಮದಿಂದ ಹೊನ್ನಾರನ್ನು ಕಟ್ಟಿ, ಭೂತಾಯಿಯನ್ನು ಪ್ರಾರ್ಥಿಸಿ ತಮ್ಮ ಜಮೀನಿನಲ್ಲಿ ಪೂಜೆ ಸಲ್ಲಿಸಿದರು.

ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿ, ಜಮೀನುಗಳಿಗೆ ಗೊಬ್ಬರ ಸಿಂಪಡಿಸಿ ಉಳುವ ಮೂಲಕ ಹೊಸ ವರ್ಷದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸಿ, ಬೆಳೆ-ಬೆಲೆ ಚೆನ್ನಾಗಿ ಬಂದು ರೋಗ ರುಜಿನ ಮಾಯ ವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.

ಹೊನ್ನೇರು ಸಡಗರ: ಯುಗಾದಿ ಆರಂಭವಾಗುತ್ತಿದ್ದಂತೆ ಮಳೆ ಬರಲಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿ ಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ಅವಳಿ ತಾಲ್ಲೂಕುಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.

ಚಿಕ್ಕಕೊಪ್ಪಲು ಗ್ರಾಮದಲ್ಲಿ ಹೊನ್ನೇರು ಸಂಭ್ರಮ: ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಚಿಕ್ಕಕೊಪ್ಪಲು ಗ್ರಾಮದಲ್ಲಿ ಪೂರ್ವಿಕರ ಕಾಲದಿಂದ ಯುಗಾದಿ ಹಬ್ಬದಂದು ಹೊನ್ನಾರು ಕಟ್ಟಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಮೊದಲು ಗ್ರಾಮದ ಅಧಿದೇವತೆ ಮುತ್ತಿಗೆಯಮ್ಮ ದೇವಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಬಳಿಕ ಎತ್ತುಗಳನ್ನು ತೊಳೆದು, ಕೊಂಬು, ಮೈಗೆ ಎಣ್ಣೆ ಹಚ್ಚಿ, ನೊಸಲಿಗೆ ಕುಂಕುಮ, ಅರಿಶಿನ, ತಿಲಕವನ್ನು ಇಟ್ಟು ಕೊರಳಿಗೆ ಹೂಮಾಲೆ ತೊಡಿಸಲಾಯಿತು. ಕೊರಳಿಗೆ ನೊಗವನ್ನು ಕಟ್ಟಿ ನೇಗಿಲು ಹೂಡಲಾಯಿತು. ರಾಸುಗಳಿಗೆ ಆರತಿ ಎತ್ತಿ ಬಾಳೆಹಣ್ಣು ತಿನ್ನಿಸಲಾಯಿತು. ರಾಸುಗಳಿಗೆ ನಮಸ್ಕರಿಸಿ ಹೊನ್ನಾರಿಗೆ ಚಾಲನೆ ನೀಡಲಾಯಿತು.

ತಮಟೆ ವಾದ್ಯದೊಂದಿಗೆ ಹೊನ್ನಾರು ಸಂಭ್ರಮದ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಮುತ್ತಿಗೆಯಮ್ಮ ದೇವ ಸ್ಥಾನದ ಆರ್ಚಕರು ರಾಸುಗಳಿಗೆ ತೀರ್ಥ ಎರಚಿದ ನಂತರ ರಾಸುಗಳ ಮೆರವಣಿಗೆ ಸಾಗಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಗ್ರಾಮದ ನಿವೃತ್ತ ಶಿಕ್ಷಕ ಟಿ.ಪುರುಷೋತ್ತಮ್, ಮುಖಂಡರಾದ ಸತ್ಯಪ್ಪ ಉಮೇಶ, ಬಸವರಾಜು, ಪ್ರಕಾಶ, ಸ್ವಾಮಿಗೌಡ, ದೊಡ್ಡ ಜವರನಾಯಕ, ರಾಮಸ್ವಾಮಿ, ಗ್ರಾಮಸ್ಥರು, ರಾಸುಗಳಿಗೆ ರೋಗರುಜಿನ ಬಾರದಿರಲಿ, ಗ್ರಾಮದಲ್ಲಿ ಸಮೃದ್ಧಿಯಾಗಿ ಮಳೆ ಬೀಳಲಿ, ಉತ್ತಮ ಬೆಳೆ, ಫಸಲು ಲಭಿಸಲಿ. ರೈತನ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.

” ನಾವು ಚಿಕ್ಕವರಿರುವಾಗ ನಮ್ಮ ಅಜ್ಜಿ, ತಾತನ ಮನೆಯಲ್ಲಿ ಹಸುಗಳನ್ನು ಕಾಲುವೆಯಲ್ಲಿ ತೊಳೆದು ಅವುಗಳನ್ನು ಹೂಗಳಿಂದ ಸಿಂಗರಿಸಿ, ಪೂಜೆ ಮಾಡುತ್ತಿದ್ದ ನೆನಪು ಇನ್ನೂ ನಮ್ಮ ಮನದಲ್ಲಿ ಉಳಿದಿದೆ. ಈ ಯುಗಾದಿಯು ನಮ್ಮ ರೈತರ ಬಾಳಿನಲ್ಲಿ ಸುಖ-ಶಾಂತಿಯನ್ನು ತಂದು ನಾಡಿನಲ್ಲಿ ಸಮೃದ್ಧ ಮಳೆ-ಬೆಳೆಯಾಗಿ ಸರ್ವರೂ ಸುಖದಿಂದ ಬದುಕುವಂತೆ ಮಾಡಲಿ.”

-ಡಾ.ಕೆ.ಆರ್.ಗೌತಮ್, ಜೀವಾ ಆರ್ಥೋ ಕೇರ್, ಕೆ.ಆರ್.ನಗರ 

 

 

Tags:
error: Content is protected !!