Mysore
27
scattered clouds

Social Media

ಶನಿವಾರ, 16 ಮೇ 2026
Light
Dark

ಓದುಗರ ಪತ್ರ: ಬೃಂದಾವನ: ಟಿಕೆಟ್ ಹಣ ವಾಪಸ್ ನೀಡಿ

ವಿಶ್ವವಿಖ್ಯಾತ ಕೆ ಆರ್‌ಎಸ್‌ನ ಬೃಂದಾವನ ಗಾರ್ಡನ್‌ನಲ್ಲಿ ಫೆ.೨೨ರ ಸಂಜೆ ಸಂಗೀತ ನೃತ್ಯ ಕಾರಂಜಿ ತಾಂತ್ರಿಕ ಕಾರಣದಿಂದ ಚಾಲನೆಗೊಳ್ಳದ ಕಾರಣ ಅಲ್ಲಿ ಸಂಗೀತ ಕಾರಂಜಿ ನೋಡಲು ಸೇರಿದ್ದ ದೇಶ, ವಿದೇಶಗಳ ಸಾವಿರಾರು ಪ್ರವಾಸಿಗರಿಗೆ ನಿರಾಸೆಯಾಗಿದೆ.

ಇದರಿಂದ ಬೇಸತ್ತು ಅವರು ಟಿಕೆಟ್ ಹಣ ವಾಪಸ್ ನೀಡುವಂತೆ ಪ್ರತಿಭಟನೆ ನಡೆಸಿರುವುದು, ಇಲಾಖೆ ಹಾಗೂ ಸಿಬ್ಬಂದಿ ಹಣ ವಾಪಸ್ ನೀಡಲು ನಿರಾಕರಿಸಿರುವುದು, ಕರ್ನಾಟಕ ಕೈಗಾರಿಕಾ ಪಡೆ ಹಾಗೂ ಸಿವಿಲ್ ಪೊಲೀಸ್ ಸಿಬ್ಬಂದಿ ಪ್ರವಾಸಿಗರನ್ನು ಹೊರ ದಬ್ಬಿರುವುದು ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಿನಿಮಾ ಷೋ, ಕ್ರಿಕೆಟ್ ಪಂದ್ಯ ರದ್ದಾದರೆ ಅಥವಾ ಸೇವೆಯಲ್ಲಿ ಲೋಪವಾದರೆ ಹಣ ವಾಪಸ್ ನೀಡುವ ನಿಯಮವಿದೆ. ಆದರೆ ಸರ್ಕಾರಿ ಇಲಾಖೆ ಅಥವಾ ಗುತ್ತಿಗೆದಾರರು ಇಂತಹ ಸಂದರ್ಭದಲ್ಲಿ ಹಣ ವಾಪಸ್ ನೀಡದೇ ಇರುವುದು ಖಂಡನೀಯ.

ಮುಂದಿನ ದಿನಗಳಲ್ಲಿ ಕೆಆರ್‌ಎಸ್ ಬೃಂದಾವನದಲ್ಲಿ ಇಂತಹ ಲೋಪಗಳಾದಾಗ ಪ್ರವಾಸಿಗರಿಗೆ ಟಿಕೆಟ್ ಹಣ ಹಿಂದಿರುಗಿಸುವ ವ್ಯವಸ್ಥೆಯನ್ನು ಇಲಾಖೆ ನೀಡುವಂತೆ ಸರ್ಕಾರ ಆದೇಶ ಮಾಡಲಿ.

-ಮುಳ್ಳೂರು ಪ್ರಕಾಶ್, ಕನಕದಾಸ ನಗರ , ಮೈಸೂರು

Tags:
error: Content is protected !!