Mysore
22
broken clouds

Social Media

ಭಾನುವಾರ, 25 ಜನವರಿ 2026
Light
Dark

400 ಕೋಟಿ ಹಣ ಸಾಗಿಸುತ್ತಿದ್ದ ಕಂಟೇನರ್‌ಗಳ ಹೈಜಾಕ್‌ : ಚೋರ್ಲಾ ಘಾಟ್‌ನಲ್ಲಿ ನಡೆದ ದರೋಡೆ ಬಗ್ಗೆ ಎಸ್‌ಪಿ ಹೇಳಿದ್ದಿಷ್ಟು

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್​​ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ ರೂ ಹಣ ದರೋಡೆ ಮಾಡಿದೆ. ಭಾರತದ ದರೋಡೆ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಎನ್ನಲಾಗುತ್ತಿದೆ. ಪ್ರಕರಣ ಬಗ್ಗೆ ಭಾನುವಾರ ಸುದ್ದಿಗೋಷ್ಠಿ ನಡೆಸಿ ಬೆಳಗಾವಿ ಎಸ್​​ಪಿ ಕೆ.ರಾಮರಾಜನ್​ ಮಾತನಾಡಿದ್ದು, ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದು, ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳಿಗೆ ಸಂಬಂಧಿಸಿದೆ. ಇಲ್ಲಿ ಘಟನೆ ಆಗಿರುವ ಕಾರಣ ಯಾರು ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಜನವರಿ 6ರಂದು ನಾಸಿಕ್ ಜಿಲ್ಲಾ ವರಿಷ್ಠಾಧಿಕಾರಿಯಿಂದ ನಮಗೆ ಪತ್ರ ಬರುತ್ತೆ. ಚೋರ್ಲಾ ಘಾಟ್​ನಲ್ಲಿ ರಾಬರಿಯಾಗಿದೆ. ಹಳೆಯ 400 ಕೋಟಿ ರೂ ಆಗಿರಬಹುದು ಅಂತಾ ಪತ್ರದಲ್ಲಿತ್ತು ಎಂದು ಮಾಹಿತಿ ನೀಡಿದರು.

ವಿಶಾಲ್ ನಾಯ್ಡು ಎಂಬಾತ ನಾಸಿಕ್​ನಲ್ಲಿ ಅಕ್ಟೋಬರ್ 22ರಂದು ಸಂದೀಪ್ ಪಾಟೀಲ್ ಎಂಬಾತನ ಕಿಡ್ನ್ಯಾಪ್ ಮಾಡಿರುತ್ತಾರೆ. ಅಕ್ಟೋಬರ್ 16ರಂದು 400 ಕೋಟಿ ರೂ ಅಪಹರಣವಾಗಿದೆ. ಆ ಹಣ ಎಲ್ಲಿಗೆ ಹೋಗಿದೆ ಅಂತಾ ಪ್ರಶ್ನೆ ಮಾಡುತ್ತಾರೆ. ಈ ರಾಬರಿ ಆಗಿದ್ದು ಚೋರ್ಲಾ ಘಾಟ್​ನಲ್ಲಿ ಅಂತಾ ಪತ್ರದಲ್ಲಿ ಉಲ್ಲೇಖವಿದೆ. ಈ ಕಾರಣಕ್ಕೆ ನಮ್ಮ ಖಾನಾಪುರದ ಸಬ್-ಇನ್ಸ್‌ಪೆಕ್ಟರ್ ಸೇರಿ ಒಂದು ತಂಡವನ್ನ ಕಳುಹಿಸಿದ್ದೇವೆ ಎಂದರು.

ಎಸ್ಐಟಿ ತಂಡ ಕೂಡ ರಚನೆ ಆಗಿದೆ. ಸಂದೀಪ್ ಪಾಟೀಲ್ ಬಳಿ ನಮ್ಮವರು ಮಾತಾಡಿದ್ದಾರೆ. ಆತ ಹೇಳಿರುವ ಪ್ರಕಾರ ಕಿಡ್ನ್ಯಾಪ್ ಮಾಡಿದವರು ಆತನಿಗೆ ದರೋಡೆ ಬಗ್ಗೆ ಹೇಳಿದ್ದಾರೆ. ಇಲ್ಲಿ ಘಟನೆ ಆಗಿರುವ ಕಾರಣ ಯಾರು ಬಂದು ದೂರು ಕೊಟ್ಟರೂ ನಾವು ತೆಗೆದುಕೊಳ್ಳುತ್ತೇವೆ. ಚೋರ್ಲಾ ಘಾಟ್​ನಲ್ಲಿ ಹೊಸದಾಗಿ ಸಿಸಿಟಿವಿ ಅಳವಡಿಕೆ ಮಾಡುತ್ತೇವೆ ಎಂದು ಎಸ್​​ಪಿ ಕೆ.ರಾಮರಾಜನ್ ಹೇಳಿದ್ದಾರೆ.

ದರೋಡೆಕೋರರು ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡಿದ್ದೇಕೆ?
ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ಮಧ್ಯೆ ಇರುವ ಚೋರ್ಲಾ ಘಾಟ್ ಪ್ರದೇಶದಲ್ಲಿ ನೆಟ್ವರ್ಕ್​ ಬರುವುದಿಲ್ಲ. ಗೋವಾದ ಕೇರಿಯಿಂದ ಬೆಳಗಾವಿಯ ಜಾಂಬೋಟಿವರೆಗೂ 4 ಗಂಟೆ ಸಂಪರ್ಕ ಕಡಿತಗೊಳ್ಳುತ್ತೆ. ಗೋವಾದಿಂದ ಚೋರ್ಲಾ ಘಾಟ್​​ಗೆ ಬರಲು 3 ಗಂಟೆ ಸಮಯ ಬೇಕು. ಚೋರ್ಲಾದಿಂದ ಮಹಾರಾಷ್ಟ್ರಕ್ಕೆ ಅರಣ್ಯ ಅಂಚಿನ ದಾರಿ ಕನೆಕ್ಟ್ ಆಗುತ್ತೆ. ಚೋರ್ಲಾದಲ್ಲಿ ಸಣ್ಣಪುಟ್ಟ ವಾಹನ ಹೋಗುವಷ್ಟು ಕಾಲುದಾರಿ ಇದೆ. ಕಂಟೇನರ್​ನಿಂದ ಮಿನಿ ಗೂಡ್ಸ್​​ಗೆ ಡಂಪ್ ಮಾಡಿ ಬಳಿಕ ಹಣ ಸಾಗಿಸಿದ್ರಾ, ಈ ಪ್ರದೇಶದಲ್ಲಿ ದರೋಡೆ ಮಾಡಿದರೆ ಯಾರಿಗೂ ಸಂಪರ್ಕ ಸಿಗೋದಿಲ್ಲ, ಹೀಗಾಗಿ ಈ ಎಲ್ಲಾ ವಿಚಾರಗಳಿಂದ ದರೋಡೆಕೋರರು ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

6 ಆರೋಪಿಗಳು ಅಂದರ್
400 ಕೋಟಿ ರೂ ದರೋಡೆ ಕೇಸ್​ಗೆ ಸಂಬಂಧಿಸಿದಂತೆ, ನಿನ್ನೆ ಐವರನ್ನ ಬಂಧಿಸಿದ್ದ ಮಹಾರಾಷ್ಟ್ರ ಎಸ್​ಐಟಿ ಅಧಿಕಾರಿಗಳು, ಇಂದು ಮತ್ತೊಬ್ಬನನ್ನ ಬಂಧಿಸಿದ್ದಾರೆ. ಜನವರಿ 23 ರಂದೇ ನಾಲ್ವರನ್ನ ಬಂಧಿಸಲಾಗಿತ್ತು. ಮಚೀಂದ್ರಾ ಮಾದವಿಯನ್ನ ವಿಚಾರಣೆ ನಡೆಸಿದ್ದಾರೆ.

ಹಣ ಯಾರಿಗೆ ಸೇರಿದ್ದು?
ಕಂಟೈನರ್ ಹೈಜಾಕ್ ಪ್ರಕರಣ ನಡೆದ ಕೆಲ ದಿನಗಳ ಬಳಿಕ, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನನ್ನು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಕಿಶೋರ್ ಸೇಠ್ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದರು. ನಂತರ ಸಂದೀಪ್‌ನನ್ನು ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಕಂಟೈನರ್ ಹೈಜಾಕ್‌ಗೆ ನೀನೇ ಕಾರಣ ಎಂದು ಚಿತ್ರಹಿಂಸೆ ಕೊಟ್ಟಿದ್ದರು.

ಅಷ್ಟೆ ಅಲ್ಲ 400 ಕೋಟಿ ಹಣ ಕೊಡದಿದ್ದರೆ ಜೀವ ಉಳಿಯೋದಿಲ್ಲ ಎಂದು ಬೆದರಿಕೆ ಹಾಕಿ, ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್ ಪಾಟೀಲ, ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ತೆರಳಿ ಜ.1ರಂದು ದೂರು ನೀಡಿದ್ದಾರೆ. ಈ ದೂರಿನಲ್ಲಿ 400 ಕೋಟಿ ರೂ.ನಗದು ಸಾಗಿಸುತ್ತಿದ್ದ ವಾಹನ ಅಪಹರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

 

Tags:
error: Content is protected !!