ಮೈಸೂರು: ವ್ಯವಹಾರದಲ್ಲಿ ಪಾಲುದಾರನ್ನಾಗಿ ಮಾಡಿಕೊಳ್ಳುವ ಆಮಿಷ ಒಡ್ಡಿ 35 ಲಕ್ಷ ರೂ ವಂಚನೆ ಮಾಡಿದ ಆರೋಪದ ಮೇಲೆ ಮೈಸೂರಿನಲ್ಲಿ ಪೊಲೀಸ್ ಪೇದೆ ಹಾಗೂ ಅವರ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೇಟಗಳ್ಳಿ ಪೊಲೀಸ್ ಪೇದೆ ಪಿ.ಜೆ.ರಾಜು ಹಾಗೂ ಇವರ ಪತ್ನಿ ನಂದಿನಿ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವ ಆಮಿಷ ನೀಡಿ 35 ಲಕ್ಷ ವಂಚಿಸಿದ್ದಾರೆ ಎಂದು ಆರೋಪಿಸಿ ವಂಚನೆಗೆ ಒಳಗಾದ ಮಹಾಲಕ್ಷ್ಮೀ, ಮಂಜುಳಾ ಹಾಗೂ ಸಿದ್ದೇಶ್ ಎಂಬುವವರು ದೂರು ನೀಡಿದ್ದರು.
ಇದನ್ನು ಓದಿ: ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂಬುದೇ ನಮ್ಮ ಸರ್ಕಾರದ ಉದ್ದೇಶ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕಳೆದ 2022ರಲ್ಲಿ ಪೇದೆ ರಾಜು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಹಾಲಕ್ಷ್ಮೀ, ಮಂಜುಳಾ ಹಾಗೂ ಸಿದ್ದೇಶ್ ಅವರ ಬಳಿ ಹಂತಹಂತವಾಗಿ 35 ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ.
ತಾನು ಪೇಪರ್ ಗ್ಲಾಸ್ ಜ್ಯೂಸ್ ಲೋಟ ಫ್ಯಾಕ್ಟರಿ ನಿರ್ವಹಿಸುತ್ತಿದ್ದೇನೆ. ಇದಕ್ಕೆ ನಿಮ್ಮನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಆಮಿಷವೊಡ್ಡಿ 35 ಲಕ್ಷ ಹಣ ಪಡೆದು ವಂಚಿಸಿದ್ದಾರೆ. ನಮ್ಮ ಹಣ ವಾಪಸ್ ನೀಡುವಂತೆ ಹೋಗಿ ಮನವಿ ಮಾಡಿದಾಗ ನಾನು ಪೊಲೀಸ್ ಇಲಾಖೆಯಲ್ಲಿದ್ದೇನೆ ಎಂದು ರಾಜು ಬೆದರಿಸಿದ್ದಾರೆ. ಜೊತೆಗೆ ಅವರ ಪತ್ನಿ ನಂದಿನಿ ಅವರು ಮಹಾಲಕ್ಷ್ಮೀ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜು ಈ ಹಿಂದೆ ಕಳ್ಳತನ ಆರೋಪಿಗಳ ಜೊತೆ ಶಾಮೀಲಾಗಿದ್ದರೆಂಬ ಆರೋಪದ ಮೇಲೆ ಅಮಾನತ್ತಾಗಿದ್ದರು. ನಂತರ ಮೇಟಗಳ್ಳಿ ಠಾಣೆಗೆ ನಿಯೋಜನೆಗೊಂಡಿದ್ದರು.





