Mysore
23
broken clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಅಧಿಕಾರದ ಹಪಾಹಪಿ ಬಿಟ್ಟು ಡಿಕೆಶಿಗೆ ಸಿಎಂ ಸ್ಥಾನ ಬಿಡಲಿ : ಎಂಎಲ್‌ಸಿ ವಿಶ್ವನಾಥ್‌

ಮೈಸೂರು : ಡಿ.ಕೆ.ಶಿವಕುಮಾರ್ ಹುಟ್ಟು ಕಾಂಗ್ರೆಸ್ಸಿಗ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿಕೆಶಿ ಶ್ರಮ ಅಧಿಕವಾಗಿದ್ದು, ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಲೇಬೇಕು. ಅಧಿಕಾರ ಬಿಟ್ಟುಕೊಡುವ ಬಗ್ಗೆ ಒಪ್ಪಂದ ಆಗಿಲ್ಲದಿದ್ದರೆ ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಲಿ ಎಂದು ವಿಧಾನಪರಿಷತ್ ಸದಸ್ಯಎ.ಎಚ್.ವಿಶ್ವನಾಥ್ ಆಗ್ರಹಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಕಟ್ಟಾ ಕಾಂಗ್ರೆಸ್ಸಿಗ. ಹೀಗಾಗಿ ಅವರು ಸಿಎಂ ಆಗಲೇಬೇಕು. ಸಿದ್ದರಾಮಯ್ಯ ಕಾಂಗ್ರೆಸ್ಸಿಗನೂ ಅಲ್ಲ, ಅಹಿಂದ ನಾಯಕನೂ ಅಲ್ಲ. ಸಿದ್ದರಾಮಯ್ಯ ತನ್ನ ಸ್ವಾರ್ಥಕ್ಕಾಗಿ ಯಾರ ಜತೆಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಅಧಿಕಾರ ಹಸ್ತಾಂತರದ ಒಪ್ಪಂದ ಆಗಿಲ್ಲದಿದ್ದರೆ ಚಾಮುಂಡಿ ಬೆಟ್ಟಕ್ಕೆ ಬಂದು ೩೦-೩೦ ತಿಂಗಳು ಅಧಿಕಾರ ಹಂಚಿಕೆ ಆಗಿಲ್ಲ ಎಂದು ಆಣೆ ಮಾಡಲಿ. ಚಾಮುಂಡಿ ತಾಯಿಯ ಮುಂದೆ ನಾನೇ ೫ ವರ್ಷ ಗಳ ಕಾಲ ಸಿಎಂ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಕರೆತಂದವರನ್ನೇ ಮುಗಿಸಿದರು
ಸಿದ್ದರಾಮಯ್ಯರನ್ನು ಕಾಂಗ್ರೆಸ್‌ಗೆ ಕರೆತಂದಾಗ ಈ ದುರಹಂಕಾರಿಯನ್ನು ಏಕೆ ಕರೆ ತರುತ್ತಿದ್ದೀರಿ ಎಂದು ಹಲವಾರು ಮಂದಿ ನಾಯಕರು ಹೇಳಿದರು. ಆದರೆ ಕಾಂಗ್ರೆಸ್‌ಗೆ ಕರೆತಂದವರನ್ನೇ ಸಿದ್ದರಾಮಯ್ಯ ಮುಗಿಸಿದರು. ಅಲ್ಲದೇ ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಸೇರಲು ಡಿ.ಕೆ.ಶಿವಕುಮಾರ್ ಪಾತ್ರ ಪ್ರಮುಖವಾಗಿದೆ. ರಾಜಕೀಯವಾಗಿ ಬೆಳೆಸಿದ ಎಚ್.ಡಿ.ದೇವೇಗೌಡರನ್ನು ಧಿಕ್ಕರಿಸಿದ ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ. ಸಿದ್ದರಾಮಯ್ಯ ಕೃತಜ್ಞತಾ ಹೀನ ಎಂದು ವಾಗ್ದಾಳಿ ನಡೆಸಿದರು. ಎಚ್.ಡಿ.ದೇವೇಗೌಡರು ಹಣಕಾಸು ಸಚಿವರನ್ನಾಗಿ ಮಾಡಿದರು. ಉಪ ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಸ್ಥಾನ ಸಿಗಲಿಲ್ಲವೆಂದು ಅಹಿಂದ ಸಮಾವೇಶಕ್ಕೆ ಹೋದರು. ಎಚ್.ಡಿ.ದೇವೇಗೌಡರು ಮಾಡಿದ ಸಹಾಯವನ್ನು ಮರೆತು ಅವರನ್ನೇ ಹೀಯಾಳಿಸಿದ್ದಾರೆ ಎಂದರು.

ಇದನ್ನು ಓದಿ: ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿ ಹಿನ್ನಡೆ : ಸಂಸದ ಯದುವೀರ್‌ ಬೇಸರ

ಸಿದ್ದರಾಮಯ್ಯನದ್ದು ಡಬಲ್ ಸ್ಟ್ಯಾಂಡ್
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ. ತಮ್ಮ ಬೆಂಬಲಿಗ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ. ಪರಿಣಾಮ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್‌ನಿಂದ ೧೪ ಮಂದಿ ಶಾಸಕರನ್ನು ಕಳುಹಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ಗೆಲ್ಲಿಸುವ ಸಲುವಾಗಿ ಶಿಕಾರಿಪುರದಲ್ಲಿ ಕುರುಬ ಸಮುದಾಯದ ನಾಯಕನಿಗೆ ಟಿಕೆಟ್ ತಪ್ಪಿಸಿದರು. ಲೋಕಸಭಾ ಚುನಾವಣೆಯಲ್ಲಿ ನಾನು ಸೋಲಲು ಕೂಡ ಸಿದ್ದರಾಮಯ್ಯ ಕಾರಣ. ಪ್ರತಾಪ್ ಸಿಂಹಗೆ ನೆರವು ನೀಡಿ ನನ್ನ ಸೋಲಿಗೆ ಕಾರಣರಾದರು. ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಸೋಲಿಗೆ ಕಾರಣ ಯಾರು? ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಲು ಅವರನ್ನೂ ಸೋಲಿಸಿದರು. ವರುಣ ಕ್ಷೇತ್ರದಲ್ಲಿ ಸ್ಪಽಸಿದಾಗ ಸುತ್ತೂರು ಶ್ರೀಗಳ ಕಾಲು ಹಿಡಿದು ಕಾ.ಪು. ಸಿದ್ದಲಿಂಗಸ್ವಾಮಿಯನ್ನು ತಣ್ಣಗಾಗಿಸಿದರು. ಚಾಮುಂಡೇಶ್ವರಿ ಬೈ ಎಲೆಕ್ಷನ್‌ನಲ್ಲಿ ಉಡುಪಿ ಮಠದ ಪೀಠಾಽಪತಿಗಳ ಕಾಲು ಹಿಡಿದರು. ಸಿದ್ದರಾಮಯ್ಯಗೆ ಒಳಗೊಂದು ಹೊರಗೊಂದು ಎಂಬಂತೆ ಡಬಲ್ ಸ್ಟ್ಯಾಂಡ್ ಹೊಂದಿದ್ದಾರೆ ಎಂದು ಹರಿಹಾಯ್ದರು.

ಜಾತಿ ಸಂಘರ್ಷ ಅಪಾಯಕಾರಿ
ಪಕ್ಷಗಳ ನಡುವಿನ ಸಂಘರ್ಷ ಸಾಮಾನ್ಯ. ಆದರೆ, ಜಾತಿ ಸಂಘರ್ಷ ಅಪಾಯಕಾರಿ. ಅಧಿಕಾರ ಹಸ್ತಾಂತರ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಯದೇ ಏನೇನೋ ಕೇಳಿ ಬರುತ್ತಿದೆ. ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಟಾರ್ಗೆಟ್ ಮಾಡಿಕೊಂಡು ಯತೀಂದ್ರ ಮಾತನಾಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಪರವಾಗಿ ನಿರಂಜನಾನಂದಪುರಿ ಸ್ವಾಮೀಜಿ ಕೂಡ ಮಾತನಾಡಿದ್ದಾರೆ. ಹಾಗಾಗಿ ನಿರ್ಮಲಾನಂದನಾಥ ಸ್ವಾಮೀಜಿ ಗುರಿಯಾಗಿಸಿಕೊಂಡು ಯತೀಂದ್ರ ಮಾತನಾಡಬಾರದಿತ್ತು. ಸಿದ್ದರಾಮಯ್ಯ ಪರವಾಗಿ ಡಾ. ಯತೀಂದ್ರ ಹೊರತುಪಡಿಸಿ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದರು.

Tags:
error: Content is protected !!