ಮದ್ದೂರು : ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಕೊಳ್ಳಿಕೊಡುಗೆ ಆದಿಶಕ್ತಿ ಅಮ್ಮನವರ ದೇವಾಲಯದ ಜಮೀನೊಂದರ ಬಳಿ ಚಿರತೆಯೊಂದನ್ನು ಸೆರೆ ಹಿಡಿಯಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ದೂರದ ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ವಹಿಸಿದ್ದಾರೆ.
ತಾಲ್ಲೂಕಿನ ದೇಶಹಳ್ಳಿ ಗ್ರಾಮದ ವೆಂಕಟೇಶ್ ಎಂಬವರ ಬಾಳೆ ತೋಟದಲ್ಲಿ ಸುಮಾರು ಎರಡು ವರ್ಷದ ಹೆಣ್ಣು ಚಿರತೆಯೊಂದು ಬೋನಿಗೆ ಬಿದ್ದಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಅಗತ್ಯ ಕ್ರಮ ವಹಿಸುವುದರ ಜತೆಗೆ ಮೇಲಾಧಿಕಾರಿಗಳ ಜತೆ ಚರ್ಚಿಸಿ ದೂರದ ಅರಣ್ಯ ಪ್ರದೇಶಕ್ಕೆ ಬಿಡಲು ಮುಂದಾಗಿದ್ದಾರೆ.
ಏಳು ತಿಂಗಳಿಂದಲೂ ದೇಶಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆಗಳು ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಚಿರತೆ ಸೆರೆ ಹಿಡಿಯುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ತಡರಾತ್ರಿ ಬೋನಿಗೆ ಚಿರತೆ ಸೆರೆಯಾಗಿದೆ.
ಇದನ್ನು ಓದಿ: ಇಬ್ಬರನ್ನು ಬಲಿ ಪಡೆದಿದ್ದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಆದೇಶ
ಸುಮಾರು ೧೫ ದಿನಗಳ ಹಿಂದೆ ದೇವಸ್ಥಾನದ ಆವರಣದಲ್ಲಿದ್ದ ನಾಯಿಯನ್ನು ತಿಂದು ಹಾಕಿದ್ದು, ಈ ಭಾಗದಲ್ಲಿ ಸುಮಾರು ನಾಲ್ಕಕ್ಕೂ ಹೆಚ್ಚು ಚಿರತೆಗಳು ಇರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಈ ಸಂಬಂಧವಾಗಿ ೨೦ ದಿನಗಳಿಂದಲೂ ಬಾಳೆ ತೋಟದ ಜಮೀನೊಂದರಲ್ಲಿ ಬೋನು ಇಟ್ಟಿದ್ದ ಹಿನ್ನೆಲೆಯಲ್ಲಿ ಎಂದಿನಂತೆ ನಾಯಿಯನ್ನು ಭೇಟೆಯಾಡಲು ಆಗಮಿಸಿದ್ದ ವೇಳೆ ಚಿರತೆ ಸೆರೆಯಾಗಿದ್ದು, ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯಾಧಿಕಾರಿ ಸವಿತ, ಗಸ್ತು ಅರಣ್ಯ ಪಾಲಕ ಚಿನ್ನಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆ ಸೆರೆಸಿಕ್ಕ ವಿಷಯ ಹರಡಿ ತಂಡೋಪ ತಂಡವಾಗಿ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಲು ಮುಗಿ ಬಿದ್ದರು.
ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಚಿರತೆ ಸೆರೆಸಿಕ್ಕ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಸ್ಥಳೀಯ ಪಶು ವೈದ್ಯರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಧಿಕಾರಿಗಳ ಆದೇಶದನ್ವಯ ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ತಿಳಿಸಿದರು.





