ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ನೆರೆಬಾಧಿತ ರೈತರ ಗೋಳು ಹೇಳತೀರದು, ಆದರೆ ಇಲ್ಲಿ ಮರಿ ಖರ್ಗೆ ಅವರಿಗೆ RSS ನಿಷೇಧ ಮಾಡುವ ಗೀಳು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ರೈತರು ನೆರೆಯಿಂದ ಕಂಗಾಲಾಗಿದ್ದಾರೆ. ಹಸಿರು ಬರ ಘೋಷಣೆ ಮಾಡಿ, ಎಕರೆಗೆ 25,000 ರೂಪಾಯಿ ಪರಿಹಾರ ಕೊಡಿ. ಸಾಲ ಮನ್ನಾ ಮಾಡಿ ಎಂದು ಅನ್ನದಾತರು ಬೀದಿಗಿಳಿದು ಪ್ರತಿಭಟನೆ ಹಾಗೂ ಬಂದ್ ಮಾಡುತ್ತಿದ್ದಾರೆ.
ಇದನ್ನು ಓದಿ: ನಾವೇನು ಕದ್ದು ಮುಚ್ಚಿ ಆರ್ಎಸ್ಎಸ್ ಶಾಖೆ ನಡೆಸುತ್ತಿಲ್ಲ: ಶಾಸಕ ಶ್ರೀವತ್ಸ
ಆದರೆ ಇಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್ಎಸ್ಎಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕಾಲಹರಣ ಮಾಡುತ್ತಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಆರ್ಎಸ್ಎಸ್ ನಿಷೇಧ ಮಾಡುವ ನಿಮ್ಮ ಗೀಳು ಬಿಡಿ. ಈ ಕೂಡಲೇ ಮುಖ್ಯಮಂತ್ರಿಗಳ ಮನವೊಲಿಸಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಸಿರು ಬರ ಘೋಷಣೆ ಮಾಡಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ. ಜನ ನಿಮಗೆ ಅಧಿಕಾರ ಕೊಟ್ಟಿರೋದು ಬರೀ ರಾಜಕಾರಣ ಮಾಡೋದಕ್ಕೆ ಅಲ್ಲ. ಆರ್ಎಸ್ಎಸ್ ಬಗ್ಗೆ ನಿಮ್ಮ ಖಯಾಲಿ ಬಿಟ್ಟು ನಿಮ್ಮ ಜವಾಬ್ದಾರಿ ನಿರ್ವಹಿಸಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




