ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆ ಮಾವುತರು ಹಾಗೂ ಕಾವಾಡಿಗರಿಗೆ ಕಿಟ್ ವಿತರಣೆ ಮಾಡಲಾಯಿತು.
ಕಿಟ್ ವಿತರಣೆ ಮಾಡಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಅರ್ಜುನ ಆನೆಯನ್ನು ನೆನೆದರು. ಈ ಕುರಿತು ಮಾತನಾಡಿದ ಅವರು, ಅರ್ಜುನ ಸ್ಮಾರಕವನ್ನು ಶೀಘ್ರದಲ್ಲೆ ಉದ್ಘಾಟನೆ ಮಾಡಲಾಗುವುದು ಎಂದರು.
ಇದನ್ನು ಓದಿ : Mysuru Dasara | ಗಜಪಡೆಗಳ ಸೆಲ್ಫೀ, ರೀಲ್ಸ್ ಗೆ ಅವಕಾಶವಿಲ್ಲ
ಇನ್ನು ಮಾವುತರು, ಕಾವಾಡಿಗಳ ಕಾರ್ಯ ವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಗೋವಾ, ಆಂಧ್ರದಿಂದಲೂ ನಮ್ಮ ಮಾವುತರಿಗೆ ಬೇಡಿಕೆ ಇದೆ. ಆನೆ ಸೆರೆ ಹಾಗೂ ಪಳಗಿಸುವಲ್ಲಿ ನಮ್ಮ ಮಾವುತರು ಮಂಚೂಣಿಯಲ್ಲಿದ್ದಾರೆ. 218 ಜನ ಮಾವುತ ಕಾವಾಡಿಗಳು ಇದ್ದಾರೆ. ನಿಮ್ಮ ಸಂಬಳ ಹೆಚ್ಚಳ ಮಾಡುವ ಪ್ರಸ್ತಾವನೆ ಇದೆ. ಪುಂಡಾನೆ ಸೆರೆ, ಆನೆಗಳ ಆರೋಗ್ಯ ಎಲ್ಲವನ್ನೂ ಮಾವುತ ಕಾವಾಡಿಗಳೇ ನೋಡಿಕೊಳ್ಳುತ್ತಿದ್ದಾರೆ. ನಿಮ್ಮದು ಮಹತ್ವವಾದ ಕಲೆ. ವೈಜ್ಞಾನಿಕ ತರಬೇತಿ ಕೊಡುವ ಕೆಲಸ ಮಾಡುತ್ತಿದ್ದೇವೆ.
8 ಸಾವಿರ ಮೌಲ್ಯದ ಒಂದು ಕಿಟ್ ವಿತರಣೆ ಮಾಡುತ್ತಿದ್ದೇನೆ. ನಿಮಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಅರಣ್ಯ ಇಲಾಖೆ ನೀಡಲಿದೆ ಎಂದು ಭರವಸೆ ನೀಡಿದರು.





