ಮೈಸೂರು : ಮೈಸೂರು ದಸರಾ ಉತ್ಸವದ ಅಂಗವಾಗಿ ಸೆ.22ರಿಂದ ಅ.1ರವರೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ದಸರಾ ಕನ್ನಡ ಪುಸ್ತಕ ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ.
ಈ ಪುಸ್ತಕ ಮೇಳದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಸಂಕಿರಣ ಸೇರಿದಂತೆ ಅನೇಕ ಸಾಹಿತ್ಯಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಲೇಖಕರು ಹಾಗೂ ಪ್ರಕಾಶಕರು ತಮ್ಮ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲು ಬಯಸಿದಲ್ಲಿ ಪುಸ್ತಕ ಬಿಡುಗಡೆ ಮಾಡಲು ಸಹ ಉದ್ದೇಶಿಸಲಾಗಿದೆ. ನಾಡಿನ ಖ್ಯಾತ ಸಾಹಿತಿಗಳು ಪುಸ್ತಕ ಮೇಳದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಪುಸ್ತಕ ಮೇಳದಲ್ಲಿ ಹೊಸ ಪುಸ್ತಕ ಬಿಡುಗಡೆ ಮಾಡಲು ಮೊದಲು ನೋಂದಾಯಿಸಿಕೊಳ್ಳಬಹುದಾಗಿದೆ.
ಪುಸ್ತಕ ಬಿಡುಗಡೆ ಮಾಡಲು ಬಯಸುವ ಪುಸ್ತಕದ ಎರಡು ಪ್ರತಿಗಳೊಂದಿಗೆ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಈ ಪುಸ್ತಕಗಳು ಯಾವುದೇ ವಿವಾದಾತ್ಮಕ ಅಂಶಗಳನ್ನು ಹೊಂದಿರಬಾರದು. ಒಂದು ವೇಳೆ ಪುಸ್ತಕ ಸಂಬಂಧ ಯಾವುದೇ ಕಾನೂನು ತೊಡಕುಗಳು ಉಂಟಾದಲ್ಲಿ ಅದಕ್ಕೆ ಲೇಖಕರು ಹಾಗೂ ಪ್ರಕಾಶಕರೇ ಜವಾಬ್ದಾರರಾಗಿರುತ್ತಾರೆ.
ಬಿಡುಗಡೆಗೆ ಪುಸ್ತಕಗಳನ್ನು ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರವನ್ನು ಪ್ರಾಧಿಕಾರ ಹೊಂದಿರುತ್ತದೆ. ಸೆ.16ರ ನಂತರ ಯಾವುದೇ ಪುಸ್ತಕಗಳನ್ನು ಬಿಡುಗಡೆಗೆ ಸ್ವೀಕರಿಸುವುದಿಲ್ಲ. ಪುಸ್ತಕ ಬಿಡುಗಡೆಗೆ ಬರುವ ಲೇಖಕರು ಮತ್ತು ಪ್ರಕಾಶಕರುಗಳಿಗೆ ಯಾವುದೇ ಸಂಭಾವನೆ, ಪ್ರಯಾಣ ವೆಚ್ಚ ಸೇರಿದಂತೆ ಇತರೆ ಯಾವುದೇ ಸೌಲಭ್ಯ ಒದಗಿಸಲು ಅವಕಾಶವಿರುವುದಿಲ್ಲ. ಬಿಡುಗಡೆಗೆ ಸ್ವೀಕೃತವಾಗುವ ಪುಸ್ತಕಗಳನ್ನು ಸಂಖ್ಯೆಗೆ ಅನುಗುಣವಾಗಿ ಪುಸ್ತಕ ಮೇಳ ನಡೆಯುವ 9 ದಿನಗಳಿಗೆ ವಿಂಗಡಿಸಿ ಯಾವ ದಿನ ಯಾವ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದೆಂಬ ವಿವರವನ್ನು ಆಯಾ ಲೇಖಕರು, ಪ್ರಕಾಶಕರಿಗೆ ತಿಳಿಸಲಾಗುವುದು. ಪುಸ್ತಕ ಬಿಡುಗಡೆಗೆ ಬಯಸುವ ಲೇಖಕರು ತಮ್ಮ ವಿವರಗಳನ್ನು ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಽಕಾರ, ಬೆಂಗಳೂರು ಅಥವಾ ಮೊ.ಸಂ : 9448056562ಗೆ ಕಳುಹಿಸಬಹುದಾಗಿದೆ.





