ಮಂಡ್ಯ : ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಆದ್ದರಿಂದಲೇ ನಾಗಮಂಗಲದ ಮಸೀದಿ ಮುಂದೆ ಸಾಗುವ ಕೆಲವು ಗಣಪತಿ ವಿಗ್ರಹಗಳ ಮೆರವಣಿಗೆಗೆ ನಿರ್ಭಂಧ ಹೇರಲಾಗಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲಿನಿಂದಲೂ ನಾಗಮಂಗಲದ ಮಸೀದಿ ಮುಂದೆ ಸಾಗುತ್ತಿದ್ದ ಕೆಲವು ಗಣಪತಿ ಮೆರವಣಿಗೆಗೆ ಅನುಮತಿ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೊಸದಾಗಿ ಪ್ರತಿಷ್ಠಾಪಿಸಲಾದ ಗಣೇಶ ವಿಗ್ರಹಗಳ ಮಸೀದಿ ದಾರಿಯಲ್ಲಿ ಹೋಗಲು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
ಕ್ಯಾಬಿನೆಟ್ ನಲ್ಲಿ ಮುಖ್ಯಮಂತ್ರಿಗಳು ಎಲ್ಲಾ ಶಾಸಕರಿಗೂ ಗಣಪತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯ ಕುರಿತು ಒತ್ತಡದಿಂದ ತೀರ್ಮಾನ ತೆಗೆದುಕೊಳ್ಳಬೇಡಿ ಹಾಗೂ ಯಾವುದೇ ಅಹಿತಕರ ಘಟನೆ ಉಂಟಾಗದಂತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲೂ ಸಹ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸೂಕ್ತವಾಗಿ ಗಣಪತಿ ವಿಸರ್ಜನೆ ಮಾಡಲು ತಿಳಿಸಿದ್ದೇನೆ ಎಂದರು.
ಧರ್ಮಸ್ಥಳ ಯಾರ ಆಸ್ತಿಯೂ ಅಲ್ಲ
ಧರ್ಮಸ್ಥಳ ಯಾರ ಆಸ್ತಿಯೂ ಅಲ್ಲ, ಶಿವನ ದರ್ಶನ ಯಾರು ಬೇಕಾದರೂ ಪಡೆಯಬಹುದು. ಧರ್ಮಸ್ಥಳದ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಇಂದು ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಿ. ಹಾದಿ ಬೀದಿಯಲ್ಲಿ ಧರ್ಮಸ್ಥಳದ ಕುರಿತು ಮಾತನಾಡುತ್ತಿದ್ದವರನ್ನು ಸ್ತಬ್ಧ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರುಗಳು ಎಂದು ಹೇಳಿದರು.
ಎಸ್ ಐ ಟಿ ತನಿಖೆ ನಡೆಸದೆ ಹೋಗಿದ್ದರೆ ದಿನ ನಿತ್ಯ ಧರ್ಮಸ್ಥಳ ಕ್ಷೇತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಲೇ ಇರುತ್ತಿದ್ದರು ಎಂದರು.





