ಕೊರೆಹುಂಡಿ ವ್ಯಾಪ್ತಿಯ ರೈತರು ಕಂಗಾಲು
೭,೨೦೦ ಎಕರೆ ಪ್ರದೇಶಕ್ಕೆ ನೀರು ಹರಿಯದೆ ಸಮಸ್ಯೆ
ನಂಜನಗೂಡು: ಕಬಿನಿ ಬಲದಂಡೆ ನಾಲೆಯ ಉಪ ನಾಲೆ ಕುಸಿದು ಬಿದ್ದಿದ್ದು, ಹುಲ್ಲಹಳ್ಳಿ ನಾಲೆಯಲ್ಲಿ ನೀರು ಹರಿಯಲಾಗದ ಪರಿಸ್ಥಿತಿ ತಲೆದೋರಿದೆ. ಕಬಿನಿ ನಾಲೆಯಿಂದ ತಾಲ್ಲೂಕಿನ ಕೊರೆಹುಂಡಿ, ಕಲ್ಲಳ್ಳಿ, ಕತ್ವಾಡಿಪುರದ ಜಮೀನುಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಉಪ ನಾಲೆ ಹುಲ್ಲಹಳ್ಳಿ ನಾಲೆ ಮೇಲೆ ಕುಸಿದು ಬಿದ್ದ ಪರಿಣಾಮ ಹುಲ್ಲಹಳ್ಳಿ ನಾಲೆಯಲ್ಲಿ ಹರಿಯುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.
ಇದರಿಂದಾಗಿ ಕತ್ವಾಡಿಪುರದ ಕಲ್ಲಳ್ಳಿ, ಕೊರೆಹುಂಡಿ, ಚಾಮಲಾಪುರ ಗ್ರಾಮಗಳ ೧೫೦ ಎಕರೆ ಸೇರಿದಂತೆ ಹುಲ್ಲಹಳ್ಳಿ ನಾಲೆಯ ೭,೨೦೦ ಎಕರೆ ಪ್ರದೇಶದ ಜಮೀನಿಗೆ ಈಗ ನೀರು ಸರಬರಾಜು ಮಾಡಲಾಗದಂತಾಗಿದೆ.
ಈ ಕಿರುನಾಲೆ ಕೊರೆಹುಂಡಿ ಸಮೀಪ ಹುಲ್ಲಹಳ್ಳಿ ನಾಲೆಯನ್ನು ಹಾದುಹೋದ ಸ್ಥಳದಲ್ಲೇ ಕುಸಿದ ಪರಿಣಾಮ ಆ ಉಪ ನಾಲೆಯ ಸಿಮೆಂಟು, ಕಬ್ಬಿಣ, ಮರಳೆಲ್ಲಾ ಹುಲ್ಲಹಳ್ಳಿ ನಾಲೆಯೊಳಗೆ ಬಿದ್ದಿದ್ದು, ನಾಲೆಯ ನೀರು ಮುಂದಕ್ಕೆ ಹರಿಯದಂತೆ ತಡೆಗೋಡೆಯಾಗಿ ಮಾರ್ಪಟ್ಟಿದೆ. ಇದರಿಂದ ಹುಲ್ಲಹಳ್ಳಿ ನಾಲೆಯ ಅಚ್ಚುಕಟ್ಟು ಪ್ರದೇಶದ ೭,೨೦೦ ಎಕರೆಗೂ ಹೆಚ್ಚು ಜಮೀನುಗಳಿಗೆ ನೀರು ಹರಿಸಲಾರದ ಪರಿಸ್ಥಿತಿ ಉಂಟಾಗಿದೆ.
ಅವಶೇಷಗಳನ್ನು ತೆಗೆಯದ ಹೊರತು ನಾಲೆಯ ನೀರು ಮುಂದೆ ಹರಿಯುವುದಿಲ್ಲ ಎಂಬಂತಾಗಿದೆ. ಭತ್ತದ ನಾಟಿಗೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದ ಬಿಳಿಗೆರೆ ಹೋಬಳಿಯ ರೈತ ಸಮೂಹ ಈಗ ನೀರಿಲ್ಲದೆ ಪರದಾಡುವಂತಾಗಿದೆ.
ಈ ಘಟನೆಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿರುವ ಕೃಷಿಕರು, ತಮಗಾಗುವ ನಷ್ಟಕ್ಕೆ ಕಬಿನಿ ನಾಲಾ ವಿಭಾಗದ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಜಾಗದಲ್ಲಿ ಆ ಉಪ ನಾಲೆ ಶಿಥಿಲವಾಗಿತ್ತು ಎಂದು ೨ ತಿಂಗಳ ಹಿಂದೆ ದುರಸ್ತಿ ಮಾಡಲಾಗಿತ್ತು. ಕಾವೇರಿ ನೀರಾವರಿ ನಿಗಮದ ಕಬಿನಿ ನಾಲಾ ವ್ಯಾಪ್ತಿಯ ಇಂಜಿನಿಯರುಗಳು ದುರಸ್ತಿ ಮಾಡಿದ ಆ ಜಾಗವೇ ಅಂದು ಹಾಕಿದ್ದ ಸಿಮೆಂಟ್ನ ಬಣ್ಣ ಮಾಸುವ ಮೊದಲೇ ಕುಸಿತಕ್ಕೊಳಗಾಗಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
” ಈ ಕಿರು ನಾಲೆ ಇದೇ ಸ್ಥಳದಲ್ಲಿ ಶಿಥಿಲವಾಗಿರುವುದು ಇದೇ ಮೊದಲಲ್ಲ. ಮೂರನೇ ಬಾರಿಗೆ, ಅದೂ ಎರಡು ತಿಂಗಳ ಹಿಂದೆ ದುರಸ್ತಿಪಡಿಸಿದ್ದು ಈಗ ಪೂರ್ಣವಾಗಿ ಕುಸಿದಿದೆ. ನೀರಾವರಿ ಅಧಿಕಾರಿಗಳಿಗೆ ನಾಲೆಯ ಮಣ್ಣಿನ ಮೇಲಿರುವ ಆಸಕ್ತಿ ಅದರ ನಿರ್ವಹಣೆ ಕುರಿತು ಇಲ್ಲದಿರುವುದೇ ಇದಕ್ಕೆ ಕಾರಣ.”
-ಶಿವಣ್ಣ ಕತ್ವಾಡಿಪುರ, ರೈತ ಸಂಘದ ಗೌರವಾಧ್ಯಕ್ಷ





