ಭೇರ್ಯ ಮಹೇಶ್
ಈ ಬಾರಿ ಅಕ್ಕಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆ; ಟಿಲ್ಲರ್, ಟ್ರಾಕ್ಟರ್ಗೆ ಎಲ್ಲಿಲ್ಲದ ಬೇಡಿಕೆ
ಕೆ.ಆರ್.ನಗರ: ಭತ್ತದ ಕಣಜವೆಂದು ಪ್ರಸಿದ್ಧಿ ಪಡೆದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದ್ದು, ಶೇ.೮೦ರಷ್ಟು ಭತ್ತದ ನಾಟಿ ಕಾರ್ಯವನ್ನು ರೈತರು ಮುಗಿಸಿ ಸಂತಸದಲ್ಲಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಬಾರಿ ವ್ಯಾಪಕ ಮಳೆಯಾಗಿದ್ದು ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಜುಲೈ ತಿಂಗಳಲ್ಲಿ ಅವಳಿ ತಾಲ್ಲೂಕಿನ ಎಲ್ಲಾ ನಾಲೆಗಳಿಗೆ ನೀರು ಹರಿಸಲಾಗಿದ್ದು, ಕೊನೆಯ ಹಂತದವರೆಗೂ ನೀರು ಹರಿದಿದೆ. ರೈತರು ಭತ್ತದ ಸಸಿ ಮಡಿ ಕಾರ್ಯ ಮಾಡಿದ್ದು, ಈಗಾಗಲೇ ಭತ್ತದ ಪೈರು ಬಂದಿದೆ. ಅವಳಿ ತಾಲ್ಲೂಕುಗಳ ಎಲ್ಲೆಡೆ ಭತ್ತದ ನಾಟಿ ಕಾರ್ಯ ಜೋರಾಗಿದೆ.
ಟಿಲ್ಲರ್, ಟ್ರಾಕ್ಟರ್, ಎತ್ತು ಮತ್ತು ನೇಗಿಲು ಇತ್ಯಾದಿಗಳನ್ನು ಬಳಸಿ ರೈತರು ಭತ್ತದ ಗದ್ದೆ ಹದ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಟಿಲ್ಲರ್, ಟ್ರಾಕ್ಟರ್ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಕಸಬಾ, ಹೊಸ ಅಗ್ರಹಾರ, ಹೆಬ್ಬಾಳು, ಚುಂಚನಕಟ್ಟೆ, ಸಾಲಿಗ್ರಾಮ, ಮಿರ್ಲೆ ಹೋಬಳಿ ಗಳಲ್ಲಿ ಭತ್ತದ ನಾಟಿ ಕಾರ್ಯವನ್ನು ರೈತರು ಮಾಡುತ್ತಿದ್ದಾರೆ. ಕಳೆದ ವರ್ಷ ಭತ್ತದ ಬೆಲೆ ಕುಸಿದಿತ್ತು. ಆದರೂ ಅಕ್ಕಿ ಬೆಲೆ ಹೆಚ್ಚಾಗಿದ್ದು, ಈ ಬಾರಿ ಕೂಡ ಅಕ್ಕಿಯ ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಹೊಂದಿರುವ ರೈತರು ಉತ್ತಮ ಹೈಬ್ರೀಡ್ ಭತ್ತದ ತಳಿಯನ್ನು ಬಿತ್ತನೆ ಮಾಡಿದ್ದು, ಈಗಾಗಲೇ ಶೇ.೮೦ರಷ್ಟು ಭತ್ತದ ನಾಟಿ ಕಾರ್ಯ ಚುರುಕುಗೊಂಡಿದೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಅಂದಾಜು ೨೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಹೊಂದಲಾಗಿದೆ.
ಕೃಷಿ ಇಲಾಖೆ ಸಜ್ಜು: ಈಗಾಗಲೇ ಕೃಷಿ ಇಲಾಖೆಯಿಂದ ರಸಗೊಬ್ಬರ, ಕೀಟನಾಶ ಕೀಟನಾಶಕದ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಭತ್ತದ ನಾಟಿ ಮಾಡುವ ಮೊದಲು ೨೦-೨೦ ರಸ ಗೊಬ್ಬರ ಬಳಸುವಾಗ ಎಕರೆಗೆ ೧೫ ಕೆಜಿ ಪೊಟಾಷ್ ಹಾಗೂ ೮ ಕೆಜಿ ಜಿಂಕ್ ಸಲ್ಪೇಟ್ ಮಿಶ್ರಣ ಮಾಡಿ ಗದ್ದೆಗಳಲ್ಲಿ ಹಾಕಿ ಎಂದು ಸಲಹೆ ನೀಡಿದ್ದಾರೆ. ರೈತರು ತಪ್ಪದೇ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿ ಇದೇ ಆಗಸ್ಟ್ ೧೬ರಂದು ಭತ್ತದ ವಿಮೆ ಮಾಡಿಸಲು ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತಾಲ್ಲೂಕಿನ ರಸಗೊಬ್ಬರ ಅಂಗಡಿಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಬೆಲೆ ಪಡೆಯದಂತೆ ಕ್ರಮ ವಹಿಸಲಾಗಿದೆ. ತಪ್ಪದೇ ಟ್ರೇಡರ್ಸ್ ಮಾಲೀಕರಿಂದ ಬಿಲ್ ಕೇಳಿ ಪಡೆಯಬೇಕು ಎಂದು ಕೃಷಿ ಇಲಾಖೆ ಜಾಗೃತಿ ಮೂಡಿಸಿದೆ.
ಯೂರಿಯಾ ದಾಸ್ತಾನು: ಅವಳಿ ತಾಲ್ಲೂಕುಗಳಲ್ಲಿ ಈಗಾಗಲೇ ಭತ್ತದ ನಾಟಿ ಮಾಡಲಾಗುತ್ತಿದ್ದು, ಆಗಸ್ಟ್ ಕೊನೆಯ ವಾರ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಇದಕ್ಕೆ ತಕ್ಕಂತೆ ಯೂರಿಯಾ ಗೊಬ್ಬರ ದಾಸ್ತಾನು ಇದೆ. ಕೃಷಿ ಇಲಾಖೆಯ ಅಧಿಕಾರಿಗಳು ಯೂರಿಯಾ ಗೊಬ್ಬರದ ಅಭಾವ ಸೃಷ್ಟಿ ಮಾಡದಂತೆ ಟ್ರೇಡರ್ಸ್ ಮಾಲೀಕರೊಂದಿಗೆ ಈಗಾಗಲೇ ಸಭೆ ನಡೆಸಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
” ರೈತರನ್ನು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನೀಡುವುದಿಲ್ಲ. ರೈತರು ಬಳಸುವ ರಸ ಗೊಬ್ಬರ, ಕ್ರಿಮಿನಾಶಕ ಔಷಧಗಳ ಬೆಲೆ ಏರಿಕೆಯಾಗಿದೆ. ಭತ್ತದ ನಾಟಿಗೆ ಕೂಲಿ ಕಾರ್ಮಿಕರ ವೆಚ್ಚ ಕೂಡ ಹೆಚ್ಚಾಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಆದ್ದರಿಂದ ಸರ್ಕಾರ ಈ ಬಾರಿ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಬೇಕು.”
-ಜೆ.ಎಂ.ಕುಮಾರ್, ಗೌರವಾಧ್ಯಕ್ಷರು, ರೈತಪರ್ವ ಸಂಘ
” ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಹೀಗಾಗಿ, ಭತ್ತ ಬೆಳೆಯಲು ಆಸಕ್ತಿ ತೋರಿದ್ದೇನೆ. ಭತ್ತದ ಫಸಲು ಬರುವವರೆಗೂ ಸಮರ್ಪಕವಾಗಿ ನಾಲೆಯಿಂದ ನೀರು ಹರಿಸಬೇಕು. ಯಾವುದೇ ಸಮಸ್ಯೆ ಬಾರದಂತೆ ಬೆಳೆ ಸಮೀಕ್ಷೆಯನ್ನು ಕಂದಾಯ ಇಲಾಖೆ ಅಽಕಾರಿಗಳಿಂದ ಮಾಡಿಸಬೇಕು. ಭತ್ತದ ಕಟಾವು ಮುನ್ನವೇ ಭತ್ತದ ಖರೀದಿ ಕೇಂದ್ರ ತೆರೆಯಬೇಕು. ಭತ್ತದ ಕಟಾವು ಮಾಡುವ ಯಂತ್ರಗಳಿಗೆ ದುಬಾರಿ ಹಣ ವಸೂಲಿ ಮಾಡುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಭತ್ತದ ಕಟಾವು ಯಂತ್ರಗಳಿಗೆ ನಿಗದಿ ದರವನ್ನು ಘೋಷಿಸಬೇಕು.”
-ಗಂಧನಹಳ್ಳಿ ಹೇಮಂತ್, ಪ್ರಗತಿಪರ ರೈತರು





