Mysore
22
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಕೇಂದ್ರದ ನಾಲ್ಕು ಸಂಹಿತೆಗಳನ್ನು ರಾಜ್ಯ ರದ್ದುಪಡಿಸಲಿ : ಎಸ್.ವರಲಕ್ಷಿ ಆಗ್ರಹ

ಮಂಡ್ಯ : ಕೇಂದ್ರ ಸರ್ಕಾರ ತಂದಿರುವ ನಾಲ್ಕು ಸಂಹಿತೆಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಬೇಕು. ರಾತ್ರಿಪಾಳಿ ಕಡ್ಡಾಯ ಮಾಡಬಾರದು. ಕೆಲಸದ ಸಮಯವನ್ನು 8 ರಿಂದ 12 ಗಂಟೆಯವರೆಗೆ ಹೆಚ್ಚಿಸಬಾರದು ಎಂದು ಸಿಐಟಿಯು ರಾಜ್ಯ ಘಟಕ ಅಧ್ಯಕ್ಷೆ ಎಸ್.ವರಲಕ್ಷ್ಮಿ ಒತ್ತಾಯಿಸಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಹಯೋಗದಲ್ಲಿ ಭಾನುವಾರ ಮುಕ್ತಾಯಗೊಂಡ ದುಡಿಯುವ ಮಹಿಳೆಯರ 9 ನೇ ರಾಜ್ಯ ಸಮಾವೇಶದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

13 ಅಪಾಯಕಾರಿ ಉದ್ದಿಮೆಗಳಲ್ಲಿ ಮಹಿಳೆಯರನ್ನು ದುಡಿಸಬಾರದು, ಪ್ಲಾಂಟೇಷನ್, ಗಾರ್ಮೆಂಟ್ಸ್ ಮುಂತಾದ ಉದ್ದಿಮೆಗಳ ಕನಿಷ್ಠ ವೇತನವನ್ನು ಕಡಿಮೆ ಮಾಡಿ, ಪ್ರತ್ಯೇಕವಾಗಿ ಅಧಿಸೂಚನೆಯಲ್ಲಿ ತರದೆ ಇರುವುದು ಸರಿಯಲ್ಲ. ಎಲ್ಲಾ ಕಚೇರಿ ಮತ್ತು ವಲಯಗಳಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು ಎಂದು ತಿಳಿಸಿದರು.

ಅಖಿಲ ಭಾರತ ಸಿಐಟಿಯು ಕಾರ್ಯದರ್ಶಿ ಎ.ಆರ್.ಸಿಂಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಪರಿಸ್ಥಿತಿ ನರಕದಂತಿದೆ, ದುಡಿಯುವ ಸ್ಥಳದಲ್ಲಿಯೂ ಕಿರುಕುಳ ಹೆಚ್ಚಾಗಿ ಹೀನ ಕೃತ್ಯಗಳು ಅವರ ಮೇಲೆ ನಡೆಯುತ್ತಿವೆ ಎಂದು ವಿಷಾದಿಸಿದರು.

ಮಧುರಾ, ಕಾಶಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವಂತಹ ಪ್ರಕರಣಗಳು ಬೆಳಕಿಗೆ ಬರುವುದನ್ನು ನಾವು ನೋಡುತ್ತಿದ್ದೇವೆ. ಪುರುಷ ಪ್ರಧಾನ ಪಾಳೆಗಾರಿಕೆ ವ್ಯವಸ್ಥೆ ಒಳಗಡೆ ಮಹಿಳೆಯರನ್ನು ರಕ್ಷಣೆ ಮಾಡುವಂತಹ ವ್ಯವಸ್ಥೆಗಳೇ ದಬ್ಬಾಳಿಕೆ ಮಾಡಲು ಈ ಮಠಗಳು, ರಾಜಕಾರಣಿಗಳು ಇಂತಹ ಘಟನೆಗಳನ್ನು ತಡೆಯುತ್ತಿಲ್ಲ. ಮುಖ್ಯವಾಗಿ ಬಿಜೆಪಿ ಮುಖಂಡ ಬ್ರಿಜ್‌ಭೂಷಣ್ ಎಂಬ ವ್ಯಕ್ತಿ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು, ಅದೇ ರೀತಿ ಅವರ ಬೆಂಬಲ ನೀಡಿದ ಶಾಸಕರು ದೌರ್ಜನ್ಯ ನಡೆಸಿದ್ದಾರೆ. ಇಷ್ಟೆಲ್ಲಾ ಆದರೂ ನ್ಯಾಯ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಜಿ.ರಾಮಕೃಷ್ಣ, ಬಾಲಾಜಿ ರಾವ್, ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ, ಕಾರ್ಯದರ್ಶಿಗಳಾದ ಸಿ.ಕುಮಾರಿ, ಮಾಲಿನಿ ಮೇಸ್ತಾ, ಸಂಚಾಲಕಿ ಎಚ್.ಎಸ್.ಸುನಂದಾ, ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ಸಿಪಿಎಂ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮುಖಂಡರಾದ ಸೌಮ್ಯಾ ಸಕಲೇಶಪುರ, ತುಳಸಿದೇವಿ, ಬಿ.ಹನುಮೇಶ್ ಪಾಲ್ಗೊಂಡಿದ್ದರು.

Tags:
error: Content is protected !!