ಮೈಸೂರು: ಕಾನೂನಾತ್ಮಕವಾಗಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕೇ ಹೊರತು ವಿಳಂಬ ಮಾಡಬಾರದು. ನಿಯಮದ ಪ್ರಕಾರವಾಗಿ ನಡೆದುಕೊಳ್ಳಬೇಕಾದ ಸಂದರ್ಭದಲ್ಲೂ ಮುಂದೂಡುವುದು ಸರಿಯಲ್ಲ ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ವಿಚಾರವಾಗಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ದೂರುದಾರರು ಮತ್ತು ಎದುರುದಾರರಿಗೆ ವಿಚಾರಣೆಯ ಸಭೆಯಲ್ಲಿ ಅವರು ಮಾತನಾಡಿದರು.
ಮೂರು ದಿನಗಳವರೆಗೆ ನಡೆದ ದೂರುಗಳ ವಿಚಾರಣೆಯು ಯಶಸ್ವಿಯಾಗಿದೆ. ಸಾರ್ವಜನಿಕ, ಸಾಮಾಜಿಕ, ಮತ್ತು ವ್ಯಕ್ತಿಗತ, ವೈಯಕ್ತಿಕ ದೂರುಗಳು ಬಂದಿವೆ. ಇದರಲ್ಲಿ ಬಹುತೇಕ ದೂರುಗಳು ವೈಯಕ್ತಿಕವಾಗಿವೆ. ಇವುಗಳನ್ನು ಸಮಯ ಪ್ರಜ್ಞೆ ಮತ್ತು ಸಮಯೋಚಿತವಾಗಿ ಇತ್ಯರ್ಥಪಡಿಸಬೇಕು. ಆದರೆ. ಕಾನೂನಿನ ವಿರುದ್ಧವಾಗಿ ನಡೆದುಕೊಂಡು ಕೆಲಸ ಮಾಡಲು ಹಿಂಜರಿದರೆ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪ ಲೋಕಾಯುಕ್ತಕ್ಕೆ ೬೦೦ ಅರ್ಜಿಗಳು ಬಂದಿದ್ದವು. ಇದರಲ್ಲಿ ವಿಚಾರಣೆ ಮಾಡಬಹುದಾದ ಅರ್ಜಿಗಳನ್ನು ಆಯ್ಕೆ ಮಾಡಿದಾಗ ೪೦೦ ಅರ್ಜಿಗಳನ್ನು ಆಯ್ಕೆ ಮಾಡಲಾಗಿತ್ತು. ಕೆಲವು ಕಾನೂನಾತ್ಮಕ, ತಾಂತ್ರಿಕ ವರದಿ ಆಧರಿಸಿ ವಿಚಾರಣೆ ಮಾಡಬೇಕಿರುವುದರಿಂದ ಸಮಯ ಪಡೆಯಲಾಗಿದೆ. ನಮ್ಮ ಹಂತದಲ್ಲಿ ಇರುವುದನ್ನು ಪರಿಹರಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದರು.





