Mysore
16
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಗ್ರಾಪಂಗಳಲ್ಲಿ ಬೂದು ನೀರು ನಿರ್ವಹಣೆ ವ್ಯವಸ್ಥೆ

ಕೆ.ಬಿ.ರಮೇಶ ನಾಯಕ

ಸ್ವಚ್ಛ ಭಾರತ ಯೋಜನೆ ಅನುದಾನ ಬಳಸಿಕೊಂಡು ಯೋಜನೆ ರೂಪಿಸಿದ ಜಿಪಂ

೪೩ ಅಮೃತ್ ಗ್ರಾಪಂಗಳಲ್ಲಿ ಯಶಸಿ ಅನುಷ್ಠಾನ; ಎಲ್ಲ ಗ್ರಾಪಂಗಳಿಗೂ ವಿಸ್ತರಣೆ 

ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೋಲಾಗದಂತೆ ಹಾಗೂ ದೈನಂದಿನ ಚಟುವಟಿಕೆಗಳಿಗೆ ಬಳಸುವ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವುದಕ್ಕಾಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಬೂದು ನೀರು ನಿರ್ವಹಣೆ ವ್ಯವಸ್ಥೆ (ಗ್ರೇ ವಾಟರ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಅಳವಡಿಸಲು ಮೈಸೂರು ಜಿಲ್ಲಾ ಪಂಚಾಯಿತಿಯು ಯೋಜನೆ ರೂಪಿಸಿದೆ.

ಹುಣಸೂರು ತಾಲ್ಲೂಕಿನ ಹರೀನಹಳ್ಳಿ, ಕಣಗಾಲು ಗ್ರಾಮಗಳಲ್ಲಿ ವೈಯಕ್ತಿಕ ಸೋಕ್ ಪಿಟ್ ಮಾದರಿಯಂತೆ ಹಾಗೂ ಅಮೃತ್ ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಮಾದರಿಯಲ್ಲೇ ಉಳಿದ ಪಂಚಾಯಿತಿಗಳಲ್ಲೂ ಬೂದು ನೀರು ನಿರ್ವಹಣೆ ವ್ಯವಸ್ಥೆ ಅಳವಡಿಸಲಾಗುತ್ತದೆ. ಇದರಿಂದಾಗಿ ಬೇಸಿಗೆ ಬಂದರೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಹಾಗೂ ನೀರು ಪೋಲಾಗದಂತೆ ತಡೆಯುವುದಕ್ಕೆ ಈ ವ್ಯವಸ್ಥೆಯು ಬಳಕೆಯಾಗಲಿದೆ.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಯೋಜನೆಯ ಎರಡನೇ ಹಂತದಲ್ಲಿ ಆರಂಭಿಸಲಾಗಿರುವಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆ ಆಯ್ಕೆಯಾಗಿದ್ದು,ಜಿಲ್ಲೆಯನ್ನು ತ್ಯಾಜ್ಯ ನೀರು ಮುಕ್ತವನ್ನಾಗಿ ಮಾಡಲುಯೋಜನೆ ರೂಪಿಸಲಾಗಿದೆ. ಮೊದಲಿಗೆ ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮ ಪಂಚಾಯಿತಿಯ ಹರೀನಹಳ್ಳಿ ಮತ್ತು ಕಣಗಾಲು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಒಡಿಎ- ಪ್ಲಸ್ ಮಾದರಿ ಗ್ರಾಮವಾಗಿಹೊರಹೊಮ್ಮಿದ್ದು, ಎರಡು ಗ್ರಾಮಗಳಲ್ಲಿರುವ ೪೨೦ ಮನೆಗಳಿಗೆ ಪ್ರತ್ಯೇಕ ಸೋಕ್ ಪಿಟ್‌ಗಳನ್ನು ಅಳವಡಿಸಿದ್ದು, ಇದೇ ಮಾದರಿಯಲ್ಲಿ ಬೇರೆ ಗ್ರಾಮಗಳಲ್ಲೂ ಅಳವಡಿಸುವಕೆಲಸ ಶುರುವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಜಿಲ್ಲಾ ಪಂಚಾಯಿತಿಯು ಗ್ರೇ ವಾಟರ್ ಮ್ಯಾನೇಜ್‌ಮೆಂಟ್ ಸಿಸ್ಟಂ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಮುಂದಾಗಿದೆ.

ಇನ್‌ಲೈನ್ ಸಂಸ್ಕರಣಾ ತಂತ್ರ: ಹಳ್ಳಿಗಳಲ್ಲಿ ಪ್ರತ್ಯೇಕ ಸೋಕ್‌ಪಿಟ್‌ಗಳನ್ನು ನಿರ್ಮಿಸುವುದು ಆದ್ಯತೆಯಾಗಿದ್ದರೂಮನೆಯ ಮಟ್ಟದಲ್ಲಿ ಭೂಮಿಯ ನಿರ್ಬಂಧದಿಂದಾಗಿ ಅದು ಹೆಚ್ಚಿನ ವ್ಯಾಪ್ತಿಯನ್ನು ಕಂಡುಕೊಳ್ಳುತ್ತಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ನಿರ್ಬಂಧ, ಕಳಪೆ ಬೆಳೆ, ಸಂಸ್ಕರಿಸಿದ ನೀರು ವಿವಿಧ ಮಾಲಿನ್ಯಕಾರಕಗಳನ್ನು ಒಳಗೊಂಡಿರುವ ನಂತರ ಮಣ್ಣಿನ ಫಲವತ್ತತೆ ಕಡಿಮೆಯಾಗುವುದು ಮೊದಲಾದ ಸಮಸ್ಯೆಗಳು ಹೆಚ್ಚುತ್ತಿವೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸುಧಾರಿತ ಸಂಸ್ಕರಣಾ ತಂತ್ರವನ್ನು ಬಳಸಿಕೊಂಡು ಮನೆಗಳ ಸಮೂಹಗಳನ್ನು ಒಳಗೊಳ್ಳುವ ಇನ್‌ಲೈನ್ ಸಂಸ್ಕರಣಾ ಘಟಕಗಳನ್ನು ಮಾಡಲಾಗುತ್ತಿದೆ. ಘಟಕಗಳಲ್ಲಿ ಕಲ್ಲಿನ ಪಿಚಿಂಗ್ ಬಳಸಿ ನಿರ್ಮಿಸಲಾದ ಪ್ರಕ್ರಿಯೆಯ ಸಮಯದಲ್ಲಿ ತ್ಯಾಜ್ಯ ನೀರು ಶೋಧನೆ ಮತ್ತು ಜಾಲರಿ ಸ್ಕ್ರೀನಿಂಗ್ ನಂತಹ ಹಲವಾರು ಹಂತಗಳ ಮೂಲಕ ಹಾದು ಹೋಗುತ್ತದೆ. ಕಲ್ಲು ಪಿಚಿಂಗ್ ಕೆಲಸದ ಪಕ್ಕದಲ್ಲಿ ಸಸ್ಯಗಳನ್ನು ನೆಡಲಾಗುತ್ತದೆ.

ಈಗಾಗಲೇ ಅಮೃತ್ ಗ್ರಾಪಂ ಕಾರ್ಯಕ್ರಮದಡಿ ಆಯ್ಕೆ ಮಾಡಲಾದ ೪೩ ಗ್ರಾಪಂಗಳಲ್ಲಿ ೧೫೧ ಇನ್‌ಲೈನ್ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ೪೦೬ ಇನ್‌ಲೈನ್ ಕೆಲಸಗಳನ್ನು ಆರಂಭಿಸಿದ್ದು, ೪೦೬ರಲ್ಲಿ ೧೭೬ ಕಲ್ಲು ಹಾಕುವ ಕೆಲಸಗಳು ಆರಂಭವಾಗಿದೆ. ೧೨೦ ಇನ್‌ಲೈನ್ ಕೆಲಸಗಳು ಪೂರ್ಣವಾಗಿದ್ದರೆ, ಉಳಿದವು ಪ್ರಗತಿಯಲ್ಲಿವೆ. ಉಳಿದ ೨೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದೆ.

” ಜಿಲ್ಲೆಯಲ್ಲಿ ಬೂದು ನೀರು ನಿರ್ವಹಣೆ ವ್ಯವಸ್ಥೆ ರೂಪಿಸಲಾಗಿದೆ. ಪ್ರತಿ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಮತ್ತು ಮರು ಬಳಕೆ ಕೆಲಸವಾಗಬೇಕು. ಜಿಲ್ಲೆಯಲ್ಲಿ ಈ ಯೋಜನೆಗೆ ಉತ್ತಮ ಸ್ಪಂದನೆ ಇದೆ. ಇಡೀ ಜಿಲ್ಲೆಯಲ್ಲಿ ವರ್ಷದೊಳಗೆ ಇನ್‌ಲೈನ್ ಸಂಸ್ಕರಣಾ ಘಟಕವನ್ನು ಅಳವಡಿಸಲಾಗುವುದು.”

-ಎಸ್.ಯುಕೇಶ್ ಕುಮಾರ್, ಸಿಇಒ, ಜಿಪಂ

ಕೃಷಿಗೆ ಮರುಬಳಕೆ: 

ಇನ್‌ಲೈನ್ ಸಂಸ್ಕರಣಾ ಘಟಕದಿಂದ ಬಿಡುಗಡೆಯಾದ ಸಂಸ್ಕರಿಸಿದ ನೀರು ಬಹುತೇಕ ವಿಷ, ರಾಸಾಯನಿಕ ಹಾಗೂ ರೋಗಕಾರಕ ಮುಕ್ತವಾಗಿರುತ್ತದೆ. ಇದನ್ನು ಕೃಷಿ ಚಟುವಟಿಕೆಗೆ ಬಳಸಬಹುದಾಗಿದೆ.ಮಲಿನ ನೀರು ಹೊರತುಪಡಿಸಿ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವ ನೀರನ್ನು ಶುದ್ಧೀಕರಣ ಮಾಡಿ ಮರು ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತದೆ.

Tags:
error: Content is protected !!