ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಬೀಜ ತಯಾರಿಸುವ ಕಂಪೆನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದು, ರೈತರಿಗೆ ನಷ್ಟ ಉಂಟಾಗಿದೆ. ಆದ್ದರಿಂದ ಕಂಪೆನಿಗಳಿಂದಲೇ ಪರಿಹಾರ ವಸೂಲಿ ಮಾಡಿ, ನಷ್ಟ ಅನುಭವಿಸಿದ ರೈತರಿಗೆ ನೀಡಬೇಕು ಎಂದು ತಿ.ನರಸೀಪುರ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಆಗ್ರಹಿಸಿರುವುದು ಸ್ವಾಗತಾರ್ಹ.
ಕೃಷಿ ಇಲಾಖೆಯು ವಿತರಿಸುವ ಮುಸುಕಿನ ಜೋಳ ಬಿತ್ತನೆ ಬೀಜದ ಪ್ಯಾಕೆಟ್ ಒಂದರಲ್ಲಿ ೪ ಕೆಜಿ ಬಿತ್ತನೆ ಬೀಜ ಇದ್ದು ೬೦೦ ರೂ. ಪಡೆಯುತ್ತಾರೆ. ಒಂದು ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ೧೫ ಸಾವಿರ ಪಡೆಯುವ ಕೃಷಿ ಇಲಾಖೆ ರೈತರಿಂದ ಒಂದು ಕ್ವಿಂಟಾಲ್ ಮುಸುಕಿನ ಜೋಳವನ್ನು ಕೇವಲ ೨೦೦ ರೂ.ಗಳಿಂದ ೨,೫೦೦ ರೂ. ನೀಡಿ ಖರೀದಿಸುತ್ತದೆ. ಈ ಹಿಂದೆ ರೈತರು ತಾವು ಬೆಳೆದ ಫಸಲನ್ನು ಎಷ್ಟು ಬೇಕೋ ಅಷ್ಟೇ ಮಾರಾಟ ಮಾಡಿ, ಉಳಿದದ್ದನ್ನು ತಾವೇ ಬಿತ್ತನೆ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದರು, ಈಗ ಅದೇ ಪದ್ಧತಿಯನ್ನು ಅನುಸರಿಸಿದರೆ ಮಾತ್ರ ರೈತ ಬದುಕಲು ಸಾಧ್ಯ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಂಕರ್ ಅವರು ಕಿವಿಮಾತು ಹೇಳಿರುವುದು ಸಮಂಜಸವಾಗಿದೆ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





