Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಮಾನವೀಯತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಿ : ಶಾಸಕ ರವಿಕುಮಾರ್‌

MLA Ravikumar

ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರೇ ಆಗಿದ್ದಾರೆ ; ಶಾಸಕ

ಮಂಡ್ಯ: ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರೇ ಆಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಚಿಕಿತ್ಸೆ ಮತ್ತು ಸೇವೆ ಒದಗಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಮಿಮ್ಸ್ ವೈದ್ಯರಿಗೆ ಕಿವಿಮಾತು ಹೇಳಿದರು.

ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ನಿರ್ದೇಶಕರು ಮತ್ತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೋಗಿಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.

ಶುದ್ಧ ಕುಡಿಯುವ ನೀರಿನ ಘಟಕ:
ಕುಡಿಯುವ ನೀರು ಮೊದಲ ಮೂಲಸೌಕರ್ಯವಾಗಿದ್ದು, ಮಿಮ್ಸನಲ್ಲಿ ಬಹಳಷ್ಟು ರೋಗಿಗಳು ಹಾಗೂ ಸಾರ್ವಜನಿಕರು ಕುಡಿಯುವ ನೀರಿನ ಕೊರತೆಯಿದೆ ಎಂದು ಆರೋಪಿಸುತ್ತಿದ್ದು, ಶಾಸಕರ ಅನುದಾನದಿಂದ ಎರಡು ಶುದ್ಧ ಕುಡಿಯುವ ನೀರಿನ ಘಟಕವನ್ನು ಸಭೆಯ ಮಂಜೂರು ಮಾಡಿ ಅವಶ್ಯವಿರುವ ಸ್ಥಳದಲ್ಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ:
ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಹಲವಾರು ದೂರುಗಳಿದ್ದು, ವಾಹನ ನಿಲುಗಡೆ ಸ್ಥಳದಲ್ಲಿ ಸಿ.ಸಿ. ಟಿ.ವಿ. ಅಳವಡಿಸಬೇಕು. ವಾಹನ ನಿಲುಗಡೆ ಮಾಡುವವರಿಗೆ ಎಲೆಕ್ಟ್ರಾನಿಕ್ ಆಧಾರಿತ ಚೀಟಿಗಳನ್ನು ನೀಡಬೇಕು ಹಾಗೂ ನಿಲುಗಡೆಯ ಸಮಯ ನಮೂದು ಮಾಡಬೇಕು ಎಂದು ಸಲಹೆ ನೀಡಿದರು.

ನಿಗದಿತವಾಗಿ ಪೊಲೀಸರು ಭೇಟಿ ನೀಡಲಿ:
ಸಂಚಾರ ಪೊಲೀಸ್ ಠಾಣೆಯವರು ನಿಗದಿತವಾಗಿ ಭೇಟಿ ನೀಡಿ ವಾಹನ ನಿಲುಗಡೆ ಸಮರ್ಪಕವಾಗಿ ನಡೆಯುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೆಲವರು ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನವನ್ನು ವಾರಗಟ್ಟಲೇ ನಿಲ್ಲಿಸಿ ಹೋಗುತ್ತಾರೆ ಎಂಬ ಆರೋಪವಿದೆ. ಇದನ್ನು ಕೂಡ ಗಂಭೀರವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಗುಣಮಟ್ಟದ ಆಹಾರ ನೀಡಿ:
ಮಿಮ್ಸನ ಕ್ಯಾಂಟೀನ್‌ನಲ್ಲಿ ಉತ್ತಮ ಗುಣಮಟ್ಟದ ಸೇವೆ ಸಿಗುತ್ತಿಲ್ಲ. ಇದನ್ನು ಪರಿಶೀಲಿಸಿ ಉತ್ತಮ ಗುಣಮಟ್ಟದ ಆಹಾರ ದೊರಕುವ ರೀತಿ ವ್ಯವಸ್ಥೆ ಮಾಡಬೇಕು ಎಂದರು.

ಅಕ್ಕ ಕೆಫೆ ಆರಂಭ:
ಅಕ್ಕ ಕೆಫೆ ಸ್ವಸಹಾಯ ಮಹಿಳಾ ಗುಂಪು ಸ್ಥಳದ ವ್ಯವಸ್ಥೆ ಮಾಡಿಕೊಂಡರೆ ೫ ಲಕ್ಷ ರೂ. ಸಹಾಯಧನ ಪಡೆದು ಅಕ್ಕ ಕೆಫೆ ಪ್ರಾರಂಭಿಸಬಹುದು. ಇದರ ಬಗ್ಗೆಯೂ ಯೋಚಿಸಿ ಉತ್ತಮ ಕ್ಯಾಂಟೀನ್‌ನ್ನು ಮಿಮ್ಸಗೆ ಒದಗಿಸಲಾಗುವುದು ಎಂದರು.

ದಿನಕ್ಕೆ ಮೂರು ಬಾರಿ ಶೌಚಾಲಯ ಸ್ವಚ್ಛಗೊಳಿಸಿ:
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶೌಚಾಲಯಗಳನ್ನು ದಿನಕ್ಕೆ ಮೂರು ಬಾರಿ ಸ್ವಚ್ಛಗೊಳಿಸುತ್ತಿರುವ ಬಗ್ಗೆ ಲಾಗ್ ಪುಸ್ತಕವನ್ನು ನಿರ್ವಹಿಸಬೇಕು. ಶೌಚಾಲಯದಲ್ಲಿ ಬಳಸುವ ಬಕೆಟ್‌ಗಳಿಂದ ಹಿಡಿದು ಮಿಮ್ಸನಲ್ಲಿ ಉಪಯೋಗಿಸುವ ವಸ್ತುಗಳ ಮೇಲೆ ಮಿಮ್ಸ ಎಂದು ನಮೂದಿಸಬೇಕು ಎಂದು ಹೇಳಿದರು.
ಹೊರ ರೋಗಿ ಚಿಕಿತ್ಸಾ ವಿಭಾಗದಲ್ಲಿ ಮಹಿಳೆಯರು ಹಾಗೂ ವಿಶೇಷಚೇತನರಿಗೆ ಪ್ರತ್ಯೇಕವಾದ ಸಾಲುಗಳ ವ್ಯವಸ್ಥೆ ಮಾಡಬೇಕು. ಔಷಧಿ ವಿತರಣಾ ಸ್ಥಳದಲ್ಲೂ ಇನ್ನೊಂದು ಹೆಚ್ಚುವರಿ ಸಾಲನ್ನು ತೆರೆಯಿರಿ. ಅದನ್ನು ನಿರ್ವಹಿಸುವ ವ್ಯವಸ್ಥೆ ಮಾಡಿ. ಆರೋಗ್ಯ ಧಾಮದಲ್ಲಿ ೧೦೦ ಹಾಸಿಗೆ ವ್ಯವಸ್ಥೆ ಮಾಡಿದ್ದು, ಆರೋಗ್ಯ ಧಾಮದ ನಿರ್ವಹಣೆಗೆ ಒಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ನಿಯೋಜಿಸುವ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.

ರೋಗಿಗಳಿಗೆ ಹೊರಗಡೆ ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಖರೀದಿ ಮಾಡಲು ವೈದ್ಯರು ಚೀಟಿ ಬರೆದುಕೊಡುತ್ತಾರೆ ಎಂಬ ಆರೋಪವಿದೆ. ಇದರ ಬಗ್ಗೆ ನಿಗಾ ವಹಿಸಿ. ಇದಲ್ಲದೇ ಡ್ಯೂಟಿ ಡಾಕ್ಟರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆಯೇ ಹಾಗೂ ಕರ್ತವ್ಯ ನಿರ್ವಹಿಸುತ್ತಾರೆಯೇ ಎಂಬುದನ್ನು ಪರಿಶೀಲಿಸಿ. ಹಾಜರಾತಿ ಪರಿಶೀಲಿಸಲು ಉನ್ನತ ತಂತ್ರಜ್ಞಾನದ ಸಾಫ್ಟ್‌ವೇರ್‌ಗಳ ಬಯೋಮೆಟ್ರಿಕ್ ಇದ್ದು, ಅದನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮಿಮ್ಸ ನಿರ್ದೇಶಕರು, ವೈದ್ಯಕೀಯ ಅಧೀಕ್ಷಕರು, ಆರ್.ಎಂ.ಒ. ಹಾಗೂ ಸಿ.ಎ.ಒ. ಅವರು ಪ್ರತಿದಿನ ಸರದಿ ಮಾಡಿಕೊಂಡು ಆಸ್ಪತ್ರೆಯನ್ನು ಪರಿಶೀಲಿಸಿದರೆ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಮಿಮ್ಸ ನಿರ್ದೇಶಕ ಡಾ. ನರಸಿಂಹಸ್ವಾಮಿ, ವೈದ್ಯಕೀಯ ಅಧಿಕ್ಷಕ ಡಾ. ಶಿವಕುಮಾರ್, ಆರ್‌ಎಂಒ ಡಾ. ದರ್ಶನ್, ಮಕ್ಕಳ ತಜ್ಞ ಡಾ. ಕೀರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

Tags:
error: Content is protected !!