Mysore
32
clear sky

Social Media

ಶನಿವಾರ, 14 ಮಾರ್ಚ್ 2026
Light
Dark

ಕಾವೇರಿ ನೀರಾವರಿ ನಿಗಮದಲ್ಲಿ ಸಂಬಳದ ಸಂಕಷ್ಟ

ಶ್ರೀಧರ್ ಆರ್ ಭಟ್

೧,೫೦೦ ಕ್ಕೂ ಹೆಚ್ಚು ಸಿಬ್ಬಂದಿಗೆ ೩ ತಿಂಗಳಿಂದ ವೇತನವಿಲ್ಲ 

ಸಂಸಾರ ನಿರ್ವಹಣೆಯ ದಾರಿ ತೋರದೆ ಕಂಗಾಲು

ರಾಜ್ಯ ಸರ್ಕಾರದತ್ತ ಚಾತಕ ಪಕ್ಷಿಯಂತೆ ನೋಡುತ್ತಿರುವ ಸಿಬ್ಬಂದಿ

ಮೈಸೂರು: ಸಂಬಳಕ್ಕಾಗಿ ಕಾಯುತ್ತಿರುವ ಕಾವೇರಿ ನೀರಾವರಿ ನಿಗಮದ ೧,೫೦೦ಕ್ಕೂ ಹೆಚ್ಚು ಸಿಬ್ಬಂದಿ… ಕಟ್ಟಡ ದುರಸ್ತಿಗೆ ಸುಣ್ಣ ಬಣ್ಣಕ್ಕೆ ಹಣವಿದೆ, ಆದರೆ ಸಿಬ್ಬಂದಿ ಸಂಬಳಕ್ಕೆ ಮಾತ್ರ ದುಡ್ಡಿಲ್ಲ! ರೈತರ ಜಮೀನುಗಳಿಗೆ ನೀರು ಹರಿಸುವ ಇವರಿಗೆ ವೇತನ ಇಲ್ಲದೆ ಗುಟುಕು ನೀರು ಕುಡಿಯಬೇಕಾದ ದುಸ್ಥಿತಿ ಎದುರಾಗಿದೆ.

ರಾಜ್ಯದ ಅತ್ಯಂತ ಪ್ರಮುಖ ನೀರಾವರಿ ನಿಗಮಗಳಲ್ಲಿ ಒಂದಾಗಿರುವ ಹತ್ತು ಜಿಲ್ಲೆಗಳ ವ್ಯಾಪ್ತಿಯ ಕಾವೇರಿ ನೀರಾವರಿ ನಿಗಮದ ಶೋಚನೀಯ ಸ್ಥಿತಿ ಇದು.

ಹಳೇ ಮೈಸೂರು ಭಾಗದ ಹತ್ತು ಜಿಲ್ಲೆಗಳನ್ನೊಳಗೊಂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿ ಗಳು, ಸಾವಿರಾರು ಸಿಬ್ಬಂದಿ ತಿಂಗಳ ಸಂಬಳ ಇಂದು ಬರುತ್ತದೆ… ನಾಳೆ ಬರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ.

ಮಾರ್ಚ್ ತಿಂಗಳಲ್ಲಿ ದಿನ ಕಳೆದುಹೋದರೂ ಅವರ ಸಂಬಳ ಇನ್ನೂ ಬಂದೇ ಇಲ್ಲ. ಭತ್ತ ಬೆಳೆಯಲು ಅನ್ನದಾತನ ಭೂಮಿಗೆ ನಾಲೆಗಳಿಂದ ನೀರು ಹರಿಸುವ ಜವಾಬ್ದಾರಿಯುತ ಕಾರ್ಯದಲ್ಲಿ ತೊಡಗಿಕೊಂಡಿರುವ ನಿಗಮದ ಪ್ರಧಾನ ನಿರ್ದೇಶಕರಿಂದ ಹಿಡಿದು ಸ್ವಚ್ಛತಾ ಸಿಬ್ಬಂದಿಗಳವರೆಗೂ ಕಳೆದ ಮೂರು ತಿಂಗಳುಗಳಿಂದಲೂ ಸಂಬಳ ಬಂದಿಲ್ಲ. ಸರ್ಕಾರಿ ಕೆಲಸ ಆಗಿರುವುದರಿಂದ ತಿಂಗಳಾಯಿತು ಎಂದರೆ ಸಂಬಳವಂತೂ ಗ್ಯಾರಂಟಿ ಎಂದು ಆರಾಮವಾಗಿದ್ದ ನಿಗಮದ ಅಧಿಕಾರಿಗಳು ಸಂಬಳ ಬಾರದೆ ಕಂಗಾಲಾಗಿದ್ದಾರೆ. ದವಸ ಧಾನ್ಯ ಖರೀದಿಸಿರುವ ಅಂಗಡಿಯವರು, ಹಾಲಿನವರು, ಮನೆ ಕೆಲಸದವರು, ತರಕಾರಿಯವರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಬಾಕಿ ಅಥವಾ ವೇತನ ಪಾವತಿ ಮಾಡುತ್ತಿದ್ದವರು, ಈಗ ಅವರೆಲ್ಲರಿಗೂ ಹಣ ಕೊಡಲು ಆಗದೆ ಪರದಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಸಂಬಳ ತಡವಾಗಿದೆ. ಮುಂದಿನ ತಿಂಗಳು ಪಾವತಿ ಗ್ಯಾರಂಟಿ ಎಂದು ಜನವರಿ, ಫೆಬ್ರವರಿಯಲ್ಲಿ ಪ್ರಯಾಸಪಟ್ಟು ಸಮಜಾಯಿಷಿ ನೀಡಿದ ಅವರನ್ನು ಒಪ್ಪಿಸಿ ನಿಟ್ಟುಸಿರುಬಿಟ್ಟಿದ್ದರಂತೆ. ಆದರೆ, ಈ ತಿಂಗಳು ಕೂಡ ಪಗಾರ ಬಾರದೆ ಕಂಗಾಲಾಗಿದ್ದಾರೆ.

ನಮ್ಮ ಮೇಲಾಧಿಕಾರಿಗಳು ಹೇಗೋ ಜೀವನ ನಡೆಸುತ್ತಾರೆ. ಆದರೆ ಸಂಸಾರ ನಿರ್ವಹಣೆಯನ್ನು ಸರಿದೂಗಿಸಲು ತಿಂಗಳ ಸಂಬಳವನ್ನೇ ನಂಬಿಕೊಂಡಿರುವ ನಮ್ಮ ಪಾಡೇನು? ಎಂಬುದಾಗಿ ಸಿಬ್ಬಂದಿ ಅಲವತ್ತುಕೊಳ್ಳುತ್ತಾರೆ.

ನಿಗಮದಲ್ಲಿ ಇದೇ ಮೊದಲ ಬಾರಿಗೆ ಸಂಬಳ ಇಷ್ಟು ತಡವಾಗುತ್ತಿದೆ. ಆದರೆ, ನಮ್ಮ ಗೋಳು ಕೇಳುವವರಾರು ಎಂದು ಸಿಬ್ಬಂದಿ ಪರಿತಪಿಸುತ್ತಿದ್ದಾರೆ. ನಮ್ಮ ನೋವಿನ ಸುದ್ದಿಯನ್ನು ಪ್ರಕಟಿಸಿ, ಅದನ್ನು ನೋಡಿಯಾದರೂ ರಾಜ್ಯ ಸರ್ಕಾರ ನಮಗೆ ಸಂಬಳವನ್ನು ನೀಡಲಿ ಎಂದು ಆಶಿಸುವ ಸಿಬ್ಬಂದಿ, ಆದರೆ ನಮ್ಮ ಹೆಸರನ್ನು ಮಾತ್ರ ಪ್ರಕಟಿಸಬೇಡಿ ಎನ್ನುತ್ತಾರೆ.

ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಮಂಡ್ಯ, ರಾಮನಗರ, ಕನಕಪುರ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿಗಮದ ಅಧಿಕಾರಿಗಳು, ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ನೀರಾವರಿ ನಿಗಮದಲ್ಲಿ ಹಾಲಿ ಇರುವ ೧,೫೪೨ ಜನರಿಗೆ ಮಾಸಿಕ ಸಂಬಳದ ಮೊತ್ತ ಅಂದಾಜು ೧೫ ಕೋಟಿ ರೂ.ಗೂ ಹೆಚ್ಚು ಬಿಡುಗಡೆಯಾಗಬೇಕಿದೆ.

Tags:
error: Content is protected !!