Mysore
22
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

‘ಸಂಜು ವೆಡ್ಸ್ ಗೀತಾ 2’ಗೆ ಕಥೆ ಕೊಟ್ಟಿದ್ದು ಯಾರು?

ನಾಗಶೇಖರ್‍ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 10ರಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರಕ್ಕಾಗಿ ಕವಿರಾಜ್ ಬರೆದ ‘ಮಳೆಯಂತೇ ಬಾ …’ ಎಂಬ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಸುದೀಪ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಸುದೀಪ್‍ ಈ ಹಾಡನ್ನು ಬಿಡುಗಡೆ ಮಾಡಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆಯ ಎಳೆಯನ್ನೂ ಕೊಟ್ಟಿದ್ದಾರಂತೆ. ಈ ವಿಷಯವನ್ನು ಸ್ವತಃ ನಿರ್ದೇಶಕ ನಾಗಶೇಖರ್‍ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ರೇಶ್ಮೆ ಬೆಳೆಗಾರರ ಕುರಿತ ಒಂದು ಮಹತ್ವದ ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ಅದರ ಜತೆಗೊಂದು ಪ್ರೇಮಕಥೆಯೂ ಸಾಗುತ್ತದೆ. ಈ ಚಿತ್ರದ ಎಳೆಯನ್ನು ಕೊಟ್ಟಿದ್ದು ಸುದೀಪ್. ‘ಮಾಣಿಕ್ಯ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಅವರು ನನಗೆ ಈ ಎಳೆ ಹೇಳಿದರು. ಇಂಥ ಕಥೆಗಳನ್ನು ನೀನು ಚೆನ್ನಾಗಿ ಮಾಡುತ್ತೀಯ ಎಂದು ನನಗೆ ಒಪ್ಪಿಸಿದ್ದರು. ‘ಸಂಜು ವೆಡ್ಸ್ ಗೀತಾ 2’ ಕಥೆಯ ಕ್ರೆಡಿಟ್ ಸುದೀಪ್ ಅವರಿಗೇ ಸಲ್ಲುತ್ತದೆ. ಇಂದು ನಮ್ಮ ಚಿತ್ರದ ಮೆಲೋಡಿ ಹಾಡನ್ನು ರಿಲೀಸ್ ಮಾಡುವ ಮೂಲಕ ನಮಗೆ ಮತ್ತೊಮ್ಮೆ ಹರಸಿದ್ದಾರೆ’ ಎಂದರು.

ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರ ವಿಷಯವನ್ನಿಟ್ಟುಕೊಂಡು ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ನಾಗಶೇಖರ್ ಈ ಚಿತ್ರದಲ್ಲಿ ಹೇಳಲು ಪ್ರಯತ್ನಿಸಿದ್ದಾರಂತೆ. ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್‌ಲ್ಯಾಂಡ್‌ವರೆಗೂ ಹೋಗುತ್ತದಂತೆ. ‘ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಆಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಅತಿಹೆಚ್ಚು ರೇಶ್ಮೆ ಬೆಳೆಯುತ್ತಾರೆ. ಆದರೆ, ಅದರ ಕ್ರೆಡಿಟ್ ಬೇರೊಂದು ಕಡೆ ಹೋಗುತ್ತಿದೆ. ಇದೇ ವಿಷಯವನ್ನು ಚಿತ್ರದಲ್ಲಿ ಹೇಳುತ್ತಿದ್ದೇನೆ. ಇದು ಬೇರೆಯದೇ ಶೈಲಿಯ ಸಿನಿಮಾ’ ಎಂದರು.

ಶ್ರೀನಗರ ಕಿಟ್ಟಿ ಮಾತನಾಡಿ, ‘ಚಿತ್ರದಲ್ಲಿ ಪ್ರತಿ ಹಾಡಿಗೂ ಅದರದೇ ಆದ ಪ್ರಾಮುಖ್ಯತೆಯಿದೆ. ಒಂದು ಪ್ರೇಮಕಥೆ, ಅದರೊಂದಿಗೆ ಮುಖ್ಯವಾದ ವಿಷಯ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶ್ರೀಧರ್ ಸುಂದರವಾದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಒಬ್ಬ ರೇಶ್ಮೆ ಬೆಳೆಗಾರನಾಗಿ ನಾನು ಕಾಣಿಸಿಕೊಂಡಿದ್ದೇನೆ’ ಎಂದರು.

ಪವಿತ್ರ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಸಂಪತ್ ಮುಂತಾದವರು ನಟಿಸಿದ್ದಾರೆ.

 

Tags:
error: Content is protected !!