ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿರುವುದು ನಿಜಕ್ಕೂ ಖಂಡನೀಯ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಕಲಾಪದ ವೇಳೆ ಶಾಸಕ ಹರೀಶ್ ಪೂಂಜಾ ಈ ರೀತಿ ಹೇಳಿದ್ದು, ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದಿದ್ದಾರೆ.
ಇದಕ್ಕೆ ಪ್ರತಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಅನುಮತಿ ಕೇಳಿದ್ದು, ದುರದೃಷ್ಟಕರ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ. ಅಷ್ಟಕ್ಕೂ ಕಾಡಿದ್ದರೇ ನಾಡು ಎಂಬ ಕನಿಷ್ಠ ಜ್ಞಾನವೂ ಹರೀಶ್ ಪೂಂಜಾರವರಿಗೆ ಇಲ್ಲದೆ ಹೋದದ್ದೇ ಬೇಸರದ ಸಂಗತಿ. ೧೯೭೪ರ ವನ್ಯಜೀವಿ ಕಾಯ್ದೆಯ ಪ್ರಕಾರ ವನ್ಯಜೀವಿಗಳನ್ನು ಕೊಲ್ಲುವುದು, ಅವುಗಳನ್ನು ಕೊಲ್ಲುವಂತೆ ಪ್ರಚೋದಿಸುವುದು ಎರಡೂ ಅಪರಾಧ. ಆನೆಗಳು ಎಂದರೆ ನಮಗೆ ವಿಶೇಷವಾದ ಪ್ರೀತಿ ಇದೆ.
ದೈವತ್ವದ ಭಾವನೆಯೂ ಇದೆ. ಇಂತಹ ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ರೈಲ್ವೆ ಕಂಬಿ ಬ್ಯಾರಿಕೇಡ್ ಅಳವಡಿಸುವುದು ಅಥವಾ ಟ್ರಂಚ್ಗಳ ನಿರ್ಮಾಣ ಮಾಡವ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕೇ ವಿನಾ ಅವುಗಳನ್ನು ಕೊಲ್ಲುತ್ತೇವೆ ಎನ್ನುವುದು ಅಮಾನವೀಯ ವರ್ತನೆ. ಸರ್ಕಾರ ಶಾಸಕ ಹರೀಶ್ ಪೂಂಜಾರವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.
-ರಾಜೇಶ್, ಅಂತರಸಂತೆ, ಎಚ್. ಡಿ. ಕೋಟೆ ತಾ.





