ನಂಜನಗೂಡು ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಬಳ್ಳೂರುಹುಂಡಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು, ನಿತ್ಯ ಗ್ರಾಮಸ್ಥರು ಆತಂಕದಲ್ಲಿಯೇ ಜೀವನ ಸಾಗಿಸುವಂತಾಗಿದೆ.
ಗ್ರಾಮದ ರೈತರು ತಮ್ಮ ಕೃಷಿ ಚಟುವಟಿಕೆ ಗಾಗಿ ಜಮೀನುಗಳಿಗೆ ಹೋಗಲು ಸಾಧ್ಯವಾಗು ತ್ತಿಲ್ಲ. ಯಾವ ಸಮಯದಲ್ಲಾದರೂ ಕಾಡಾನೆಗಳು, ಹುಲಿಗಳು, ಕಾಡುಹಂದಿಗಳು ದಾಳಿ ನಡೆಸಬಹುದು ಎಂಬ ಆತಂಕ ಹೆಚ್ಚಾಗಿದೆ. ಪ್ರತಿನಿತ್ಯ ಇಲ್ಲಿ ಕಾಡುಪ್ರಾಣಿಗಳು ದಾಳಿ ನಡೆಸಿ ರೈತರು ಬೆಳೆದ -ಸಲನ್ನು ತುಳಿದು, ತಿಂದು ನಾಶ ಮಾಡುವ ಜತೆಗೆ ರೈತರ ಮೇಲೂ ದಾಳಿ ಮಾಡಿ ಪ್ರಾಣ ಹಾನಿ ಮಾಡಿರುವ ಉದಾಹರಣೆಗಳಿವೆ.
ಕಾಡಾನೆಗಳಂತೂ ಹಗಲು ರಾತ್ರಿ ಎನ್ನದೇ ದಾಳಿ ಮಾಡುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಂತೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಅವರು ಕಾಡಾನೆಗಳು ಬಂದಾಗ ಪಟಾಕಿ ಸಿಡಿಸಿ ಅವುಗಳನ್ನು ಹಿಮ್ಮೆಟ್ಟಿಸುತ್ತಾರೆಯೇ ವಿನಾ ಅವುಗಳು ನಾಡಿಗೆ ಬಾರದಂತೆ ತಡೆಗಟ್ಟಲು ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಅಲ್ಲದೆ ರೈತರ ಫಸಲಿನ ನಷ್ಟಕ್ಕೆ ಸೂಕ್ತ ಪರಿಹಾರವೂ ಸಿಗುವುದಿಲ್ಲ.
ಕಾಡಿನ ಸುತ್ತ ರೈಲ್ವೆ ಕಂಬಿ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರೂ ಕಾಡಾನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಕ್ಷೇತ್ರದ ಶಾಸಕರು ಹಾಗೂ ಸಂಸದರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕಿದೆ.
–ಮಹಾಂತೇಶ್ ಬಸಪ್ಪ, ಬಳ್ಳೂರುಹುಂಡಿ, ನಂಜನಗೂಡು ತಾ





