ಮೈಸೂರು: ಸ್ವರಗಳ ಸಂತ ಇಳಯರಾಜ ಸಂಗೀತ ಸುಧೆಯೊಂದಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಯುವ ದಸರಾ ಸಂಪನ್ನಗೊಂಡಿತು. ಸಂಗೀತದ ಮೋಡಿಗಾರನ ಗಾನಸುಧೆಯೊಂದಿಗೆ ಐದು ದಿನಗಳ ಯುವ ದಸರಾ ಸಂಭ್ರಮದಿಂದ ಮುಕ್ತಾಯಗೊಂಡಿತು.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸಂಗೀತ ಕಾರ್ಯಕ್ರಮ ನೀಡಿದ ಇಳಯರಾಜ ನೆರೆದಿದ್ದ ಸಹಸ್ರಾರು ಜನರ ಮನಗೆದ್ದರು. ಗುರುವಾರ ಸಂಜೆ ಮಳೆಯ ಸಿಂಚನದೊಂದಿಗೆ ಇಳಯರಾಜ ತಂಡದ ಸಂಗೀತ ಕಾರ್ಯಕ್ರಮ ಆರಂಭಗೊಂಡಿತು. ಗಾಯನಕ್ಕೆ ಮನಸೋತ ವರುಣ ಕೃಪೆ ತೋರಿದ್ದರಿಂದ ಕೇಳುಗರು ನಾದಲೋಕದಲ್ಲಿ ಮಿಂದೆದ್ದರು. ಮಳೆಯನ್ನೂ ಲೆಕ್ಕಿಸದ ಜನತೆ ಕುಳಿತ ಜಾಗದಲ್ಲಿಯೇ ತಲೆದೂಗುತ್ತಾ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಪ್ರೋತ್ಸಾಹಿಸಿದರು.
ತಂಡದ ಪರವಾಗಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್. ಪಿ. ಬಿ. ಚರಣ್ ಅವರು ಸಂತೋಷಕ್ಕೆ ಹಾಡು ಸಂತೋಷಕ್ಕೆ. . . ಎಂಬ ಗೀತೆ ಹಾಡುತ್ತಿದ್ದಂತೆ ನೆರೆದಿದ್ದವರೆಲ್ಲ ಚಳಿ, ತುಂತುರು ಮಳೆಯ ನಡುವೆಯೂ ಕುಣಿದು ಕುಪ್ಪಳಿಸಿದರು. ಅಲ್ಲದೇ ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು… ಎಂಬ ಗೀತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾ ಯಿತು. ತಂಡದ ಕಲಾವಿದರು ಆಕಾಶದಿಂದ ಜಾರಿ ಭೂಮಿಗೆ ಬಂದ ನೋಡಿ ಗೀತೆಯನ್ನು ಪ್ರಸ್ತುತಪಡಿಸಿದರು. ಗಾಯಕಿ ಶ್ವೇತಾ ಮೋಹನ್, ಹೇಳೇ ಕೋಗಿಲೆ ಇಂಪಾಗಲಾ.. ಹೇಳೇ ಇಬ್ಬನಿ ತಂಪಾಗಲಾ… ಗೀತೆಯ ಮೂಲಕ ಸಂಗೀತ ಸುಧೆ ಹರಿಸಿದರು. ಈ ಸಂದರ್ಭದಲ್ಲಿ ಕೆಲವರು ಕೊಡೆಯನ್ನು ಹಿಡಿದೇ ಕುಣಿದು ಕುಪ್ಪಳಿಸಿದರು. ಬಳಿಕ ಕೇಳಿಬಂದ ಐ ಲವ್ ಯು.. ಜೀವ ಹೂ ಆಗಿದೆ… ಗೀತೆ ಸಂಗೀತಲೋಕವನ್ನೇ ಸೃಷ್ಟಿಸಿತು. ಸನ್ಮಾನ: ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಪಶು ಸಂಗೋಪನ ಸಚಿವ ಕೆ. ವೆಂಕಟೇಶ್, ಸಂಸದ ಸುನಿಲ್ ಇನ್ನಿತರರು ಇಳಯರಾಜ ಅವರಿಗೆ ಮೈಸೂರು ಪೇಟಾ-ಶಾಲು ಹಾಕಿ ಸನ್ಮಾನಿಸಿದರು.