ಚಾಮರಾಜನಗರ: ವಿವಿಧ ಜಾನಪದ ಕಲಾತಂಡಗಳು, ಅದ್ದೂರಿ ಮೆರವಣಿಗೆಗಳು, ಸ್ಥಬ್ದ ಚಿತ್ರಗಳು, ಎತ್ತಿನ ಗಾಡಿ ಮೆರವಣಿಗೆ, ಸಿರಿಧಾನ್ಯದ ಮಹತ್ವ ತಿಳಿಸಿದ ಅಧಿಕಾರಿಗಳು. ರೈತ ದಸರಾ ಯಶಸ್ಸಿಗೆ ಇವೆಲ್ಲವೂ ಸಾಕ್ಷಿಯಾದವು.
ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ದಸರಾ ಉಪಸಮಿತಿಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮಕ್ಕೆ ಎಂ.ಎಸ್.ಐ.ಎಲ್. ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಸ್ವತಃ ಎತ್ತಿನ ಗಾಡಿ ಚಲಿಸುವ ಮೂಲಕ ರೈತ ದಸರಾಗೆ ಚಾಲನೆ ನೀಡಿದರು.
ಆಕರ್ಷಕ ಜಾನಪದ ಕಲಾತಂಡಗಳು, ಅಲಂಕೃತ ಎತ್ತಿನ ಗಾಡಿಗಳು, ಕೃಷಿ ಸಂಬಂಧಿತ ಇಲಾಖೆಗಳ ಸ್ತಬ್ದಚಿತ್ರಗಳಿಂದ ಅದ್ದೂರಿ ಮೆರವಣಿಗೆ ನಡೆಯಿತು.
ಗಮನ ಸೆಳೆದ ಎತ್ತಿನಗಾಡಿ
ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ವೀರಗಾಸೆ, ಗೊರವರ ಕುಣಿತ, ಹುಲಿವೇಷ, ಕಂಸಾಳೆ ಕಲಾವಿದರ ತಂಡಗಳು ಮೆರವಣಿಗೆಗೆ ಆಕರ್ಷಕ ಮೆರುಗು ನೀಡಿದವು. ಕಬ್ಬು, ಬಾಳೆ, ತಳಿರು, ತೋರಣಗಳಿಂದ ಅಲಂಕೃತಗೊಂಡಿದ್ದ ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಅಲ್ಲದೆ ಕೃಷಿ ಸಂಬಂಧಿತ ವಿವಿಧ ಇಲಾಖೆಗಳಾದ ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಗಳ ಸ್ತಬ್ದಚಿತ್ರಗಳು ಮೆರವಣಿಗೆಯ ಅಂದ ಹೆಚ್ಚಿಸಿದವು.
ಮೆರವಣಿಗೆಯು ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ, ಜಿಲ್ಲಾಡಳಿತ ಭವನ ಸಾಗಿ ಪ್ರವಾಸಿ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಂತ್ಯವಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಬೀದ್, ಉಪನಿರ್ದೇಶಕರಾದ ಸುಷ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯ್ಕುಮಾರ್, ಅಧಿಕಾರಿಗಳು, ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಇತರೆ ರೈತ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.