Mysore
22
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಓದುಗರ ಪತ್ರ: ದಸರಾ ವೇದಿಕೆಗಳಲ್ಲಿ ರಾಜಕೀಯ ಸಲ್ಲದು

ದಸರಾ ಮಹೋತ್ಸವದ ವೇದಿಕೆ ಕಾರ್ಯಕ್ರಮಗಳು ಎಂದರೆ ಅಲ್ಲಿ ಮೈಸೂರು ಸಂಸ್ಥಾನ, ಮಹಾರಾಜರ ಇತಿಹಾಸ, ಮೈಸೂರಿನ ಗತವೈಭವದ ಬಗ್ಗೆ ಪರಿಚಯಿಸುವುದು ಅಗತ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ದಸರಾ ಉದ್ಘಾಟನೆಯ ಕಾರ್ಯಕ್ರಮದಿಂದ ಹಿಡಿದು ಸಮಾರೋಪ ಸಮಾರಂಭದವರೆಗೂ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ರಾಜಕೀಯ ಭಾಷಣಗಳನ್ನು ಮಾಡುತ್ತಾ ದಸರಾದ ಉದ್ದೇಶವನ್ನೇ ರಾಜಕಾರಣಿಗಳು ಮರೆತಿದ್ದಾರೇನೋ ಅನಿಸುತ್ತದೆ. ಈ ಬಾರಿಯ ದಸರಾ ಉದ್ಘಾಟನಾ ಸಮಾರಂಭದಲ್ಲಿಯೂ ಇದೇ ಚಾಳಿ ಮುಂದುವರಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು ತಮ್ಮ ಭಾಷಣದುದ್ದಕ್ಕೂ ವಿಪಕ್ಷಗಳನ್ನು ಟೀಕಿಸುವುದು, ಅವರಮೇಲೆ ಆರೋಪಗಳನ್ನು ಮಾಡುತ್ತಾ ರಾಜಕೀಯ ಭಾಷಣಗಳನ್ನೇ ಮುಂದುವರಿಸಿದರೆ ವಿನಃ ಯಾರೂ ಕೂಡ ದಸರಾ ಕಾರ್ಯಕ್ರಮಗಳ ಬಗ್ಗೆಯಾಗಲಿ, ಮೈಸೂರಿನ ಬಗ್ಗೆಯಾಗಲಿ, ದಸರಾದ ರೂಪರೇಷೆಯ ಬಗ್ಗೆಯಾಗಲಿ ಮಾತಾಡಲಿಲ್ಲ. ಜನಪ್ರತಿನಿಧಿಗಳಾದವರು ರಾಜಕೀಯ ಪ್ರೇರಿತ ಕಾರ್ಯಕ್ರಮಗಳಲ್ಲಿ ರಾಜಕೀಯದ ಮಾತುಗಳನ್ನಾಡುವುದು ಸೂಕ್ತ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಎಲ್ಲ ಪಕ್ಷದವರೂ ಭಾಗವಹಿಸುವುದರಿಂದ ವೇದಿಕೆಗಳ ಮೇಲೆ ಪಕ್ಷಾತೀತವಾಗಿ, ರಾಜಕೀಯೇತರ ವಿಚಾರಗಳನ್ನು ಮಾತನಾಡಬೇಕು. ಆದ್ದರಿಂದ ಚುನಾಯಿತ ಪ್ರತಿನಿಧಿಗಳು ದಸರಾ ಕಾರ್ಯಕ್ರಮಗಳ ವೇದಿಕೆಗಳಲ್ಲಿ ರಾಜಕೀಯ ಪ್ರೇರಿತ ಭಾಷಣಗಳನ್ನು ಬಿಡಲಿ.
-ಎಂ.ಪಿ.ದರ್ಶನ್ ಚಂದ್ರ, ಮುಕ್ಕಡಹಳ್ಳಿ,

Tags:
error: Content is protected !!