Mysore
29
moderate rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸರಗೂರಿನಲ್ಲಿ ಮೈತ್ರಿ ಪಕ್ಷಗಳ ನಡುವೆ ಭಿನ್ನಮತ

ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಧಿಕಾರ ಹಿಡಿದ ಬಿಜೆಪಿ; ಜಾ.ದಳ ಆಕ್ರೋಶ

ಮಂಜು ಕೋಟೆ

ಎಚ್.ಡಿ.ಕೋಟೆ: ಕ್ಷೇತ್ರದ ಸರಗೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾ ವಣೆಯ ಫಲಿತಾಂಶ ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ಮುಖಂಡರಲ್ಲಿ ಬಿರುಕು ಮೂಡಿಸಿದೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಜಾ.ದಳ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುತ್ತಿದ್ದರೆ, ಕ್ಷೇತ್ರದ ಸರಗೂರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜಾ.ದಳ ಮತ್ತು ಬಿಜೆಪಿ ಪಕ್ಷದ ಮುಖಂಡರ ನಡುವೆ ಅಧಿಕಾರ ಹಿಡಿಯುವ ಪೈಪೋಟಿಯಲ್ಲಿ ಭಿನ್ನಮತ ಉಂಟಾಗಿದೆ.

ಪಟ್ಟಣ ಪಂಚಾಯಿತಿಯಲ್ಲಿ 11 ಜನ ಸದಸ್ಯರ ಪೈಕಿ 6 ಮಂದಿ ಬಿಜೆಪಿಯವರು, ಇಬ್ಬರು ಜಾದಳದ ಸದಸ್ಯರು, ಮೂವರು ಕಾಂಗ್ರೆಸ್ ಪಕ್ಷದವರು ಇದ್ದಾರೆ.

ಕಳೆದ ಸಾಲಿನಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ ಎಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ಬಾರಿಯೂ ಅದೇ ಮೀಸಲಾತಿ ಪ್ರಕಟವಾಗಿದ್ದು, ಬಿಜೆಪಿ ಮತ್ತು ಜಾ.ದಳದವರು ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿ ಜಿಲ್ಲಾಧ್ಯಕ ಎಲ್.ಆರ್.ಮಹದೇವಸ್ವಾಮಿ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ತಾಲ್ಲೂಕು ಅಧ್ಯಕ್ಷರಾದ ಗುರುಸ್ವಾಮಿ, ಗೋಪಾಲ ಸ್ವಾಮಿ, ದೊಡ್ಡನಾಯಕ ಮತ್ತಿತರರು ಸಭೆ ನಡೆಸಿ ನಾವು ಸೂಚಿಸಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಸ್ಪರ್ಧಿಗಳಿಗೆ ಸದಸ್ಯರು ಒಗ್ಗಟ್ಟಾಗಿ ಮತ ನೀಡ ಬೇಕೆಂದು ಸೂಚಿಸಿ ಎರಡೂ
ಪಕ್ಷಗಳ 8 ಜನ ಸದಸ್ಯರನ್ನು ಮತ್ತು ತಾಲ್ಲೂಕು ಅಧ್ಯಕ್ಷರನ್ನು ಪ್ರವಾಸಕ್ಕೆ ಕಳುಹಿಸಿದ್ದರು.

ನಂತರ ಈ ಮುಖಂಡರು ಮತ್ತೆ ಸಭೆ ನಡೆಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಯಾವ ಪಕ್ಷದವರಾ ಗಬೇಕೆಂಬುದನ್ನು ತೀರ್ಮಾನಿಸಿ ವಿಚಾರವನ್ನು ಗೌಪ್ಯವಾಗಿಟ್ಟಿದ್ದರು.

ಚುನಾವಣೆಯ ದಿನವಾದ ಸೋಮವಾರ ಪ್ರವಾಸಿ ಮಂದಿರದಲ್ಲಿ ಬೀಚನಹಳ್ಳಿ ಚಿಕ್ಕಣ್ಣ ಮತ್ತು ಎಲ್.ಆರ್.ಮಹದೇವ ಸ್ವಾಮಿಯವರ ನಡುವೆ ಅಧಿಕಾರದ ವಿಚಾರವಾಗಿ ಮಾತಿನ ಚಕಮಕಿ ನಡೆದು ಭಿನ್ನಾಭಿಪ್ರಾಯ ಉಂಟಾಗಿ, ಬಿಜೆಪಿ ಯವರು ಅಧ್ಯಕ್ಷ ಸ್ಥಾನಕ್ಕೆ ರಾಧಿಕಾ ಶ್ರೀನಾಥ್ ಅವರನ್ನು ಕಣಕ್ಕಿಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ವೀರೇಶ್ ನಾಮಪತ್ರ ಸಲ್ಲಿಸಿದರು.

ಇತ್ತ ಜಾ.ದಳ ಮುಖಂಡರು ಚೈತ್ರ ಸ್ವಾಮಿ ಅವರಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿಸಿದರು. ಚುನಾವಣೆಯಲ್ಲಿ ಬಿಜೆಪಿಯ ಸ್ಪರ್ಧಿಗಳು 6 ಮತಗಳನ್ನು ಗಳಿಸಿ ಜಯ ಗಳಿಸಿದರೆ, ಜಾ.ದಳದವರು ಎರಡು ಮತಗಳನ್ನು ಪಡೆದು ಸೋಲುಂಡರು.

ಕಾಂಗ್ರೆಸ್ ಸದಸ್ಯರುಗಳು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ತಟಸ್ಥವಾಗಿದ್ದುದು ಚುನಾವಣೆ ಗಮನ ಸೆಳೆಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಎಲ್‌.ಆರ್. ಮಹದೇವಸ್ವಾಮಿಯವರ ಜೊತೆ ಅನೇಕ ಬಾರಿ ಮಾತುಕತೆ ನಡೆಸಿ, ಕಳೆದ ಬಾರಿ ಬಿಜೆಪಿಯ ರಾಧಿಕಾ ಅವರು ಅಧ್ಯಕ್ಷರಾಗಿದ್ದು, ಈ ಬಾರಿ ನಮ್ಮ ಪಕ್ಷದ ಶ್ವೇತಾ ಅವರಿಗೆ ಅವಕಾಶ ನೀಡುವಂತೆ ಕೇಳಿದಾಗ ಸಮ್ಮತಿಸಿದ್ದರು. ಆದರೆ, ಮಾತಿನಂತೆ ನಡೆದುಕೊಳ್ಳದಿರುವುದು ನೋವುಂಟು ಮಾಡಿದೆ.
-ಬೀಚನಹಳ್ಳಿ ಚಿಕ್ಕಣ್ಣ, ಜಾ.ದಳ ಮುಖಂಡರು

ನಮ್ಮ ಪಕ್ಷದವರು ಆರು ಜನ ಸದಸ್ಯರಿದ್ದು ನಮಗೆ ಪ್ರಥಮ ಹಂತದಲ್ಲಿ ಅಧ್ಯಕ್ಷ ಸ್ಥಾನ ನೀಡಿ, 12 ತಿಂಗಳ ನಂತರ ನೀವು ತೆಗೆದುಕೊಳ್ಳಿ ಎಂದು ಜಾ.ದಳ ಮುಖಂಡರಿಗೆ ತಿಳಿಸಿದ್ದೆವು. ಆದರೆ ಅವರು ಯಾವುದಕ್ಕೂ ಒಪ್ಪದೆ ಇದ್ದಾಗ ಪಕ್ಷದ ರಾಜ್ಯಾಧ್ಯಕರ ನಿರ್ದೇಶನದಂತೆ ನಾವು ಅಧಿಕಾರ ಹಿಡಿದಿದ್ದೇವೆ. ತಾಲ್ಲೂಕಿನಲ್ಲಿ ಉತ್ತಮ ಆಡಳಿತ ನಡೆಸುತ್ತೇವೆ.

-ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರು

Tags: