Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಓದುಗರ ಪತ್ರ: ಸರ್ವ ಪಕ್ಷಗಳ ವಿಶ್ವಾಸ ಅಗತ್ಯ

ಕೇಂದ್ರ ಸರ್ಕಾರದ ಮಹತ್ವದ ನಿರ್ಣಯಗಳಲ್ಲಿ ಒಂದಾದ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆಗೆ ಮೋದಿ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ. ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಏಕ ಕಾಲದಲ್ಲಿ ನಡೆಸುವ ಮಹತ್ವದ ಯೋಜನೆ ಇದಾಗಿದ್ದು, ಇದಕ್ಕೆ ಕಾಂಗ್ರೆಸ್ ಸೇರಿದಂತೆ ಕೆಲ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಲೋಕಸಭೆಗೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಭಾರತಕ್ಕೆ ಹೊಸತೇನಲ್ಲ.

ಸ್ವತಂತ್ರ ಭಾರತದ ಮೊದಲ ಎರಡು ಸಾರ್ವತ್ರಿಕ ಚುನಾವಣೆಗಳ ಜತೆಯಲ್ಲಿಯೇ ವಿವಿಧ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆಗಳು ನಡೆದಿದ್ದವು. ಏಕ ಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ದೇಶಕ್ಕೆ ಆರ್ಥಿಕ ಹೊರೆಯು ತಪ್ಪುವುದರ ಜತೆಗೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರದ ಖರ್ಚನ್ನೂ ಕಡಿಮೆಗೊಳಿಸಬಹುದು. ಇದನ್ನು ಜಾರಿಗೆ ತರಲು ಸಾಂವಿಧಾನಿಕ ಬದಲಾವಣೆಗಳು ಆಗಬೇಕು. ಜಾರಿ ಮಾಡುವ ಮುನ್ನ ಚುನಾವಣಾ ಚಕ್ರಗಳನ್ನು ಮರುಹೊಂದಾಣಿಕೆ ಜತೆಗೆ ಕಾನೂನುಬದ್ಧವಾಗಿ ಸಮರ್ಥನೀಯ ಚೌಕಟ್ಟನ್ನು ಕಟ್ಟುವುದು ಅವಶ್ಯ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರದ ಎಲ್ಲ ನಿರ್ಣಯಗಳಿಗೂ ಪರ-ವಿರುದ್ಧದ ಚರ್ಚೆ ಉದ್ಭವಿಸುವುದು ಸಹಜ. ಒಂದು ದೇಶ ಒಂದು ಚುನಾವಣೆ ಜಾರಿಯಾದರೆ ಅದರಿಂದ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಬಹುದು. ಆದ್ದರಿಂದ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ಅವರ ವಿಶ್ವಾಸವನ್ನೂ ಪಡೆದು ಈ ಯೋಜನೆಯನ್ನು ಸರ್ವಾನುಮತದಿಂದ ಅನುಷ್ಠಾನಕ್ಕೆ ತರುವುದು ಸೂಕ್ತ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

 

Tags: