ಮೈಸೂರು: ಇದೇ ತಿಂಗಳ 28 ರಂದು ನಡೆಯಲಿರುವ ಕೂರ್ಗಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ನಿರ್ದೇಶಕ ಸ್ಥಾನಕ್ಕಾಗಿ ಚುನಾವಣೆಗೆ ನಡೆಯಲಿದೆ. ಆದರೆ, ಈ ಚುನಾವಣೆಗೆ ಸ್ಥಳೀಯ ಹಾಲು ಒಕ್ಕೂಟದ ಷೇರುದಾರರಿಂದಲೇ ಆಕ್ಷೇಪ ಕೇಳಿ ಬಂದಿದೆ.
ಚುನಾವಣೆಯ ಕ್ರಮವಾಗಿ ನಡೆಯುತ್ತಿಲ್ಲ. ನೀತಿ ನಿಬಂಧನೆಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಷೇರುದಾರರು ಆರೋಪಿಸುತ್ತಿದ್ದಾರೆ.
ಹಾಲು ಉತ್ಪಾದಕ ಸಂಘ ಒಕ್ಕೂಟದಲ್ಲಿ ಸದಸ್ಯತ್ವ ಪಡೆಯದೆ ಇರುವವರು ಮತ್ತು ಪತ್ನಿ ಸದಸ್ಯರಾಗಿದ್ದರೆ, ಗಂಡ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಇದು ಅಕ್ರಮವಾಗುತ್ತದೆ ಹಾಗಾಗಿ ಈ ಚುನಾವಣೆಯನ್ನ ಅಸಿಂಧು ಮಾಡಬೇಕು ಮತ್ತು ಕಳೆದ 23 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಅಧ್ಯಕ್ಷರಾಗಿ ನಾಗೇಂದ್ರ ಮತ್ತು ಕಾರ್ಯದರ್ಶಿಯಾಗಿ ಸೀತಾರಾಮ್ ಅವರೇ ಮುಂದುವರೆದುಕೊಂಡು ಬಂದಿದ್ದಾರೆ ಎಂದು ಆಕ್ಷೇಪಿಸಿದರು.
ಬೋನಸ್ ಹಣ ಕೊಡುವಾಗ ಷೇರುದಾರರ ಬಳಿ ಖಾಲಿ ಕಾಗದದ ಮೇಲೆ ಸಹಿ ಮಾಡಿಸಿಕೊಂಡು ಅವರು ಆ ಕಾಗದದ ಮೇಲೆ ಅಧ್ಯಕ್ಷ ಕಾರ್ಯದರ್ಶಿಗಳಾಗಿ ಮುಂದುವರೆಯಲು ನಮ್ಮ ಅಭ್ಯಂತರ ಇಲ್ಲ ಇವರನ್ನೇ ಮುಂದುವರಿಸಬಹುದು ಎಂದು ಷೇರುದಾರರು ಅಭಿಪ್ರಾಯದಂತೆ ತಾವೇ ಖಾಲಿ ಕಾಗದದ ಮೇಲೆ ಬರೆದುಕೊಂಡು ಅದನ್ನ ಮೇಲಧಿಕಾರಿಗಳಿಗೆ ಕೊಟ್ಟು ಇದುವರೆಗೂ ಮುಂದುವರೆದುಕೊಂಡು ಬಂದಿದ್ದಾರೆ. ಅಮೇಲೆ ವಾರ್ಷಿಕ ಸಭೆಗಳನ್ನೂ ಮಾಡಲ್ಲ, ಸಂಸದ ವೆಚ್ಚದ ಬಗ್ಗೆ ಮಾಹಿತಿಯನ್ನೂ ಕೊಡುವುದಿಲ್ಲ. ಈಗಲೂ ಅವರೇ ಚುನಾವಣೆ ಸ್ಪರ್ಧೆ ಮಾಡಿದ್ದಾರೆ. ಜೊತೆಗೆ ಇವರಲ್ಲದೆ, 12 ಸ್ಥಾನಕ್ಕೆ 21 ಜನ ಸ್ಪರ್ಧೆ ಮಾಡಿದ್ದಾರೆ. ಇವರಲ್ಲಿ ಕೆಲವರು ಚುನಾವಣೆಗೆ ಸ್ಪರ್ಧೆ ಮಾಡಲು ಅನರ್ಹರು. ಸಂಘದ ಸದಸ್ಯರಲ್ಲದವರೂ ಚುನಾವಣೆಗೆ ನಿಂತಿದ್ದಾರೆ. ಹಾಗಾಗಿ ಈ ಚುನಾವಣೆಯನ್ನ ಮುಂದೂಡಬೇಕು ಮತ್ತು ಚುನಾವಣೆಯನ್ನು ಕ್ರಮಬದ್ಧವಾಗಿ ನಡೆಸಬೇಕು ಎಂದು ಕೂರ್ಗಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಒಕ್ಕೂಟ ಸದಸ್ಯರು ಆಗ್ರಹಿಸಿದ್ದಾರೆ.
ಈ ವೇಳೆ ಡೈರಿ ಬಳಿ ಬಂದು ಕೆಲಕಾಲ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಘದ ಸದಸ್ಯರ ಮತ್ತು ಮುಖಂಡರಾದ ನಾಗರಾಜು,ಧನಂಜಯ, ನಾಗಣ್ಣ,ಜಯರಾಮು,ಅಮಿತ್,ಕೃಷ್ಣ,ಮಾದೇಶ್ ಸೇರಿದಂತೆ ಹಲವಾರು ಭಾಗಿಯಾಗಿದ್ದರು.