Mysore
21
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಓದುಗರ ಪತ್ರ| ಚಾಮುಂಡಿಬೆಟ್ಟದಲ್ಲಿರುವ ಕುಡಿಯುವ ನೀರಿನ ಘಟಕ ದುರಸ್ತಿಪಡಿಸಿ

ಮೈಸೂರಿನ ಚಾಮುಂಡಿಬೆಟ್ಟದ ದಾಸೋಹ ಭವನದ ಮುಂಭಾಗದಲ್ಲಿರುವ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಅನೇಕದಿನಗಳೇ ಕಳೆದಿದ್ದು, ಭಕ್ತರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಭಕ್ತರಿಗೆ ಪ್ರಸಾದ ಸೇವನೆಯ ಬಳಿಕ ಅನುಕೂಲವಾಗಲಿ ಎಂದು ಇಲ್ಲಿ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ ಈ ಘಟಕ ಅನೇಕ ದಿನಗಳ ಹಿಂದೆಯೇ ಕೆಟ್ಟು ಹೋಗಿದ್ದು, ಕುಡಿಯುವ ನೀರಿಗಾಗಿ ಭಕ್ತರು ಅಕ್ಕಪಕ್ಕದ ಅಂಗಡಿ, ಹೋಟೆಲ್‌ಗಳನ್ನು ಅವಲಂಬಿಸಬೇಕಾಗಿದೆ. ಅಲ್ಲದೆ ಕೆಲವರು ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ತಂದು ಬಳಿಕ ಬಾಟಲಿಯನ್ನು ಇಲ್ಲಿಯೇ ಬೀಸಾಡಿ ಹೋಗುತ್ತಿದ್ದಾರೆ.

ಈಗ ಆಷಾಢ ಮಾಸವಾಗಿರುವುದರಿಂದ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆಷಾಢ ಶುಕ್ರವಾರವಂತೂ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಭಕ್ತರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾದದ್ದು ಚಾಮುಂಡಿಬೆಟ್ಟ ಆಡಳಿತ ಮಂಡಳಿಯ ಕರ್ತವ್ಯ. ಆದರೆ ಇಲ್ಲಿನ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದ್ದರೂ ಅದನ್ನು ರಿಪೇರಿ ಮಾಡಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ.

ಇನ್ನು ಬೆಟ್ಟದ ಮೆಟ್ಟಿಲುಗಳಿಗೆ ವಿದ್ಯುತ್ ದೀಪಗಳಲ್ಲದೆ ಮುಂಜಾನೆಯ ನಸುಕಿನ ಕತ್ತಲಿನಲ್ಲಿಯೇ ಭಕ್ತರು ಕಾಡುಪ್ರಾಣಿಗಳು ಮತ್ತು ಕಳ್ಳರ ಆತಂಕದ ನಡುವೆ ಬೆಟ್ಟ ಹತ್ತಬೇಕಾಗಿದೆ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಚಾಮುಂಡಿಬೆಟ್ಟಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ.
-ಬ್ಯಾಂಕ್ ಶಿವಕುಮಾರ್, ಜೆ.ಪಿ.ನಗರ, ಮೈಸೂರು.

Tags:
error: Content is protected !!