ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಟ ಧನ್ವೀರ್ ಗೌಡ ಅವರು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ನಟ ದರ್ಶನ್ರನ್ನು ಅವರ ಕುಟುಂಬ ಜೈಲಿಗೆ ಬಂದು ಭೇಟಿ ಮಾಡಿದ ಬೆನ್ನಲ್ಲೇ ಇಂದು ನಟ ಧನ್ವೀರ್ಗೌಡ ಭೇಟಿ ಮಾಡಿದ್ದಾರೆ. ನಟನನ್ನು ನೋಡೋದಕ್ಕಾಗಿ
ಇಂದು ಬೆಳಿಗ್ಗೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ನಟ ಧನ್ವೀರ್ ಗೌಡ ಅವರು, ಕೆಲ ಸಮಯ ಜೈಲಿನ ಹೊರಗಡೆ ಕಾದು ಕುಳಿತಿದ್ದರು. ಬಳಿಕ ಜೈಲು ಅಧಿಕಾರಿಗಳು ನಟ ಧನ್ವೀರ್ ಗೌಡರನ್ನು ದರ್ಶನ್ ಭೇಟಿ ಮಾಡಲು ಅನುವು ಮಾಡಿಕೊಟ್ಟರು.
ಬಳಿಕ ಸೆಲ್ ಬಳಿ ತೆರಳಿದ ಧನ್ವೀರ್ ಗೌಡ ದರ್ಶನ್ರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ ಎನ್ನಲಾಗಿದ್ದು, ಈ ವೇಳೆ ದರ್ಶನ್ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ದರ್ಶನ್ ಭೇಟಿಯ ಬಳಿಕ ಪ್ರತಿಕ್ರಿಯಿಸಿದ ನಟ ಧನ್ವೀರ್ ಗೌಡ ಅವರು, ದರ್ಶನ್ ಜೊತೆ ಜಾಸ್ತಿ ಹೊತ್ತು ಮಾತನಾಡಲು ಆಗಲಿಲ್ಲ. ಅವರು ತುಂಬಾ ಬೇಜಾರಿನಲ್ಲಿದ್ದಾರೆ ಎಂದರು.
ಇನ್ನೂ ನಿನ್ನೆ ಬೆಳಿಗ್ಗೆ ದರ್ಶನ್ ತಾಯಿ ಮೀನಾ, ತಮ್ಮ ದಿನಕರ್, ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ದಾರೆ. ಮಗನ ಸ್ಥಿತಿ ನೋಡುತ್ತಿದ್ದಂತೆ ತಾಯಿ ಮೀನಾ ತೂಗುದೀಪ್ ಭಾವುಕರಾಗಿದ್ದಾರೆ. ದರ್ಶನ್ಗೆ ಸಹೋದರ ದಿನಕರ್ ಧೈರ್ಯ ತುಂಬಿದ್ದಾರೆ. ಈ ವೇಳೆ ಮುಂದಿನ ಕಾನೂನು ಹೋರಾಟಕ್ಕೆ ಕುಟುಂಬಸ್ಥರ ಜೊತೆ ದರ್ಶನ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನೂ ಜೈಲಿನ ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ. ಕಳೆದ ವಾರ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ಭೇಟಿ ಮಾಡಿದ್ದರು. ನಂತರ ನಟ ವಿನೋದ್ ಪ್ರಭಾಕರ್, ರಕ್ಷಿತಾ ಪ್ರೇಮ್ ದಂಪತಿ ಭೇಟಿ ಮಾಡಿ ಮಾತನಾಡಿದ್ದರು.