ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ಸ್ಥಂಭ ವಿವಾದವು ಇತ್ತೀಚೆಗೆ ರಾಜ್ಯದ್ಯಾಂತ ಸದ್ದು ಮಾಡಿತ್ತು. ಇದೀಗ ಈ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ರೌಡಿ ಶೀಟರ್ ತೆರೆಯುವ ಸಂಬಂಧ ಏಳು ದಿನಗಳ ಒಳಗೆ ಉತ್ತರಿಸುವಂತೆ ಪೊಲೀಸರು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಮೂವರು ಕಾರ್ಯಕರ್ತರಿಗೆ ಕೆರಗೋಡು ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದೆ. ಕೆರಗೋಡಿನ ಧ್ವಜ ಸ್ಥಂಭ ವಿಚಾರದಲ್ಲಿ ಅನ್ಯಕೋಮಿನ ಜನಾಂಗದವರನ್ನು ಹೆದರಿಸುವುದು, ಬೆದರಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಚೋದನೆಗೆ ಒಳಪಡಿಸುತ್ತಿದ್ದೀರಿ. ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವುದರಿಂದ ನಿಮ್ಮ ವಿರುದ್ಧ ರೌಡಿ ಶೀಟರ್ ತೆರೆಯಬಾರದೇಕೆ ಎಂದು ನೋಟಿಸ್ ಮೂಲಕ ಪೊಲೀಸರು ಪ್ರಶ್ನಿಸಿದ್ದಾರೆ.