Mysore
23
broken clouds
Light
Dark

ಅಂಬರೀಶ್‌ ಶ್ರೀಮತಿಯಾಗಿ ಜೆಡಿಎಸ್‌ ಜೊತೆ ನಿಲ್ಲುವುದು ಅಪರಾಧ: ಚೆಲುವರಾಯಸ್ವಾಮಿ

ಮಂಡ್ಯ: ಅಂಬರೀಶ್‌ ಅವರ ಶ್ರೀಮತಿಯಾಗಿರುವ ಸುಮಲತ ಅಂಬರೀಶ್‌ ಅವರು ಬುದ್ದಿವಂತರಿದ್ದಾರೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಸಮರ್ಥರಿದ್ದಾರೆ. ಅವರು ಜೆಡಿಎಸ್‌ ಜೊತೆ ನಿಲ್ಲುವುದು ಅಕ್ಷಮ್ಯ ಅಪರಾಧ. ಅವರು ಇದನ್ನು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚೆಲುವರಾಯಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಅಂಬರೀಶ್‌ ಅವರು ಕಾಂಗ್ರೆಸ್‌ ಸೇರಿದರೇ ನಮಗೆ ಯಾವುದೇ ಆಕ್ಷೇಪಣೆಯಿಲ್ಲ. ಅವರು ಬಂದರೆ ಸ್ವಾಗತಿಸುತ್ತೇವೆ. ಅವರ ಶಿಷ್ಯರು ನಮ್ಮ ಜೊತೆ ಮಾತನಾಡಿದ್ದಾರೆ. ಸುಮಲತಾ ಅವರು ಕಾಂಗ್ರೆಸ್‌ ಬರುವಂತೆ ನಾವು ಒತ್ತಾಯ ಮಾಡುವುದಿಲ್ಲ ಸ್ವತಃ ಯೋಚಿಸಿ ಸ್ವಾಭಿಮಾನದ ನಿರ್ಧಾರ ತೆಗೆದುಕೊಳ್ಳಲಿ. ಸುಮಲತಾ ಅಂಬರೀಶ್ ಕಾಂಗ್ರೆಸ್ ಗೆ ಬೆಂಬಲ ಘೋಷಿಸಬೇಕು. ಇಲ್ಲ ಅವರು ತಟಸ್ಥವಾಗಿ ಇರುವ ನಿರ್ಧಾರ ತೆಗೆದುಕೊಳ್ಳಲಿ ಎಂದರು.

ಇನ್ನು ಕಾಂಗ್ರೆಸ್‌ಗೆ ಸುಮಲತಾ ಸೇರ್ಪಡೆಗೊಂಡರೆ ಪಕ್ಷದಲ್ಲಿ ಸ್ಥಾನಮಾನ ಸಿಗಲಿದೆಯಾ ಎಂಬ ಪ್ರಶ್ನೆಗೆ, ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಕಳೆದ ಬಾರಿಯ ಚುನಾವಣೆ ವೇಳೆ ನಾವು ಮೈತ್ರಿಗೆ ಸಹಕರಿಸದೇ ಸುಮಲತಾಗೆ ಬೆಂಬಲಿಸಿದ ರೀತಿಯಲ್ಲಿ ಸುಮಲತಾ ಇಂದು ನಮಗೆ ಬೆಂಬಲಿಸಬೇಕು. ಅದು ಬಿಟ್ಟು ಅವರು ಅಮಿತ್‌ ಶಾ, ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಮೈತ್ರಿಗೆ ಬೆಂಬಲ ನೀಡುವುದು ಅವರ ಇಚ್ಛೆ. ಆದರೆ, ಸುಮಲತಾ ಅವರು ತಮ್ಮ ಆತ್ಮ ಸಾಕ್ಷಿಗೆ ವಿರುದ್ಧವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.