Mysore
26
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಆರೋಗ್ಯ ನೋಡಿಕೊಂಡು ಸ್ಮಾರ್ಟಾಗಿ ಬದುಕಿರಿ!

ಇ.ಆರ್.ರಾಮಚಂದ್ರನ್

ಹಿರಿಯ ನಾಗರಿಕರು ದೈಹಿಕವಾಗಿ ಮತ್ತು ಆರ್ಥಿಕವಾಗಿ ಜಾಗರೂಕರಾಗಿದ್ದರೆ ಮುಂದಿನ ಜೀವನ ಸುಖಮಯವಾಗಿ ಸಾಗುತ್ತೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ, ವ್ಯಾಯಾಮ ಮತ್ತು ಉತ್ತಮ ನಿದ್ರೆ ಅತ್ಯವಶ್ಯಕ. ಇವುಗಳಲ್ಲಿ ಸಮತೋಲನ ಕಾಪಾಡಿಕೊಂಡರೆ ಆರೋಗ್ಯದಲ್ಲಿ ಏರುಪೇರಾಗುವುದನ್ನು ಕಡಿಮೆ ಮಾಡಬಹುದು. ನಮ್ಮ ಯೋಗ ಮಾಸ್ಟರ್ ಹೇಳುತ್ತಿದ್ದರು ‘ಹೊಟ್ಟೆ, ದಿಂಬಿನ ಚೀಲವಲ್ಲ. ಸಿಕ್ಕಾಪಟ್ಟೆ ಹಾಕಿ ತುರುಕುವುದಕ್ಕೆ; ಅದರಲ್ಲಿ ಅರ್ಧ ಭಾಗದಷ್ಟು ತುಂಬಿ; ಕಾಲು ಭಾಗನೀರು ಕುಡಿಯಿರಿ; ಇನ್ನು ಕಾಲು ಭಾಗಗಾಳಿ ಓಡಾಡಲು ಹಾಗೇ ಬಿಡಿ. ಈ ನಿಯಮವನ್ನು ಪ್ರತಿ ಊಟದಲ್ಲೂ ಪಾಲಿಸಿದರೆ, ರೋಗ ನಿಮ್ಮ ಹತ್ತಿರ ಸುಳಿಯಲ್ಲ’ ಅಂತ. ಇದನ್ನು ಪಾಲಿಸಿಕೊಂಡು ಬಂದವರಿಗೇ ಗೊತ್ತು ಇದು ಎಷ್ಟು ನಿಜ ಎಂದು.

ಮನುಷ್ಯ ಈಗ ಕೂತಲ್ಲೇ ಆಹಾರ ಮಾಡಿಕೊಳ್ಳುತ್ತಾನೆ. ಕೆಲಸದಿಂದ ನಿವೃತ್ತಿ ಹೊಂದಿದ ಮೇಲಂತೂ ಆತ ಮನೆಯಿಂದ ಹೊರಗೆ ಹೋಗುವುದು ಕಡಿಮೆಯಾದರೆ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಆದ್ದರಿಂದ ಪ್ರತಿದಿನ 2-3 ಕಿ.ಮೀ. ನಡೆಯುವುದು ಅವಶ್ಯ.
ಕೆಲವರು ಬೆಳಿಗ್ಗೆ ಯೋಗಾಸನ ಮಾಡುತ್ತಾರೆ. ಇದರಿಂದಲೂ ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಶಾಂತಿ ದೊರಕುತ್ತದೆ. ಈ ವಾಕಿಂಗ್ ಮತ್ತು ಯೋಗಾಸನವನ್ನು ಸ್ನೇಹಿತರೊಂದಿಗೆ ಮಾಡಿದರೆ ಇನ್ನೂ ಅನುಕೂಲ.

ನಾವು ಕನಿಷ್ಠ 7 ಗಂಟೆಯಾದರೂ ನಿದ್ರೆ ಮಾಡಬೇಕು. ಒಳ್ಳೆಯ ನಿದ್ರೆ ಮಾಡಿದಾಗ ದೇಹ ಲವಲವಿಕೆಯಿಂದಿರುತ್ತದೆ. ದೇಹಕ್ಕೆ ವ್ಯಾಯಾಮ ಚೆನ್ನಾಗಿ ಸಿಕ್ಕಿದರೆ, ನಿದ್ರೆಯೂ ಚೆನ್ನಾಗಿ ಬರಲಿದೆ. ಇದರ ಜೊತೆ ಮನಸ್ಸನ್ನು ಚುರುಕಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ತಾಂತ್ರಿಕವಾಗಿ ಅನೇಕ ಸುಧಾರಣೆಗಳು, ಬದಲಾವಣೆಗಳು ನಮ್ಮ ಸುತ್ತಮುತ್ತಲು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಮುಖ್ಯವಾದ ಮತ್ತು ನಮ್ಮ ದೈನಂದಿನ ಜೀವನಕ್ಕೆ ಹಾಸುಹೊಕ್ಕಾಗಿರುವ ಹೊರಗಿನ ಜಗತ್ತಿನೊಡನೆ ಸಂಪರ್ಕ ಮಾಡುವುದು, ಪ್ರಾವಿಡೆಂಟ್ ಫಂಡ್ ಆಫೀಸಿನೊಡನೆ ಮಾತುಕತೆ, ನಮ್ಮ ಬ್ಯಾಂಕಿನೊಡನೆ ಸಂವಾದ, ಗ್ಯಾಸ್ ರೀಫಿಲ್ ಬೇಕಾದಾಗ ಸಂಪರ್ಕ ಸ್ಟ್ರಾಟ್ ಫೋನಿನಲ್ಲೇ ನಡೆಯುತ್ತೆ. ಸ್ಮಾರ್ಟ್ ಫೋನ್ ಉಪಯೋಗ, ಅದರಲ್ಲಿ ಮಾಹಿತಿ ಕಳುಹಿಸುವುದು, ದಾಖಲೆಗಳನ್ನು ಕಳುಹಿಸುವುದು ಇತ್ಯಾದಿಗಳನ್ನು ಕಲಿಯುವುದು ಒಳ್ಳೆಯದು. ಯಾವ ಕಾರಣಕ್ಕೂ ಅಗಂತಕರ ಜೊತೆ ಫೋನಿನಲ್ಲಿ ಮಾತನಾಡುವಾಗ ಜಾಗ್ರತೆ ವಹಿಸಬೇಕು. ಬ್ಯಾಂಕಿನ ಅಕೌಂಟ್ ನಂಬರ್, ಒಟಿಪಿ ನಂಬರ್ ಕಳುಹಿಸದೆ ಜಾಗರೂಕತೆ ವಹಿಸುವುದನ್ನು ಕಲಿಯಬೇಕು. ತಾಂತ್ರಿಕವಾಗಿ ಹಿರಿಯ ನಾಗರಿಕರು ಹಿಂದುಳಿಯಬಾರದು.

ಈಗೆಲ್ಲಾ ದಿನಬಳಿಕೆಯ ಸಾಮಗ್ರಿಗಳು, ಪುಸ್ತಕಗಳನ್ನು ಆನ್ ಲೈನ್‌ನಲ್ಲೇ ಖರೀದಿಸಬಹುದು. ಅಮೆಜಾನ್, ಪ್ಲಿಪ್‌ ಕಾರ್ಟ್, ಬಿಗ್ ಗ್‌ಬ್ಯಾಸ್ಕೆಟ್‌ ಮುಂತಾದ ಆನ್‌ಲೈನ್ ಮಾರುಕಟ್ಟೆಗಳ ಮೂಲಕ ಖರೀದಿಸಿದರೆ ಅವು ನಮ್ಮ ಮನೆ ಬಾಗಿಲಿಗೆ ಬರುತ್ತವೆ.

ಸಾಮಗ್ರಿಯಲ್ಲಿ ಏನಾದರೂ ನ್ಯೂನತೆ, ಗುಣಮಟ್ಟವಿಲ್ಲದಿದ್ದರೆ ಅದನ್ನು ವಾಪಸ್ಸು ಕಳುಹಿಸಿ ಬದಲಾಯಿಸಿಕೊಳ್ಳಬಹುದು. ಇದರಿಂದ ಮಾರುಕಟ್ಟೆಗೆ ಹೋಗುವ ಪ್ರಮೇಯ ತಪ್ಪುತ್ತದೆ. ಮುಖ್ಯವಾಗಿ ನಾವು ಖರೀದಿಸುವ ಸಾಮಗ್ರಿಗೆ, ಅದು ನಮ್ಮ ಕೈ ಸೇರಿದಾಗ ದುಡ್ಡು ಕೊಟ್ಟರಾಯಿತು. ಅದನ್ನು ‘ಕ್ಯಾಶ್-ಆನ್ -ಡೆಲಿವರಿ’ ಎಂದು ಕರೆಯುತ್ತಾರೆ. ಬ್ಯಾಂಕಿನಿಂದ ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡುವ ಸಮಸ್ಯೆ ಎದುರಿಸಬೇಕಾಗಿಲ್ಲ.

ನಮ್ಮ ರಕ್ತ ಪರಿಶೀಲನೆ ಮಾಡಿಸಬೇಕೆಂದು ಡಾಕ್ಟರ್ ಸಲಹೆ ನೀಡಿದಾಗ ನಾವು ನಮ್ಮ ಸ್ಮಾರ್ಟ್‌ಫೋನಿನಿಂದ ರಕ್ತ ತಪಾಸಣಾ ಕೇಂದ್ರಕ್ಕೆ ಕರೆ ಮಾಡಿದರೆ ಅವರು ನಿಯಮಿತ ಸಮಯಕ್ಕೆ ಬಂದು ರಕ್ತ ತೆಗೆದುಕೊಂಡು ಹೋಗಿ, ಅದರ ಫಲಿತಾಂಶವನ್ನು ನಮಗೆ ಸಂದೇಶದ ಮೂಲಕ ತಿಳಿಸುತ್ತಾರೆ. ಅದನ್ನು ನಮ್ಮ ಡಾಕ್ಟರಿಗೆ ರವಾನಿಸಿದರೆ ಅವರು ನಮಗೆ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡುತ್ತಾರೆ. ಇನ್ನೂ ಔಷಧವನ್ನೂ ನಾವು ಮನೆಗೆ ತರಿಸಿಕೊಳ್ಳುವ ಸೌಲಭ್ಯವಿದೆ. ಇದನೆಲ್ಲ ನಾವು ಮನೆಯಲ್ಲೇ ಮಾಡಿಕೊಳ್ಳಬಹುದು.

ನಾವು ನಮ್ಮ ಮಕ್ಕಳು ಅಥವಾ ಮೊಮ್ಮಕ್ಕಳಿಂದ ಸ್ಮಾರ್ಟ್ ಫೋನ್‌ಗಳನ್ನು ಹೇಗೆ ಉಪಯೋಗಿಸಬೇಕು ಎಂದು ಕಲಿತರೆ, ಅದು ನಿವೃತ್ತಿಯ ವೇಳೆ ನಮ್ಮ ಜೀವನ ಸುಗಮವಾಗಿ ನಡೆಸಲು ಸಹಾಯವಾಗುತ್ತದೆ. ಮನೆಗೆ ತರಕಾರಿ ಹಣ್ಣು, ತಿಂಡಿ, ಊಟ, ಔಷಧಿ, ಕೇಬಲ್ ಚಾರ್ಜ್, ಸ್ಕೂಲ್ ಫೀಸ್, ಬ್ಲಡ್ ಟೆಸ್ಟ್, ಸರ್ಕಾರಕ್ಕೆ ಕಟ್ಟುವ ತೆರಿಗೆ, ಆಸ್ತಿ ತೆರಿಗೆ, ಲೈಟ್ ಬಿಲ್ ಮತ್ತು ಫೋನ್ ರಿಚಾರ್ಜ್, ಟೈನ್/ ಬಸ್/ ವಿಮಾನ ಟಿಕೆಟ್ ಬುಕಿಂಗ್ ಇವೆಲ್ಲವನ್ನೂ ಮನೆಯಲ್ಲೇ ಕೂತು ಮಾಡಬಹುದು. ಇವುಗಳನ್ನು ಯಾವ ರೀತಿ ಜಾಗರೂಕತೆಯಿಂದ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡರೆ ನಮ್ಮ ಜೀವನ ಹಾಸುಹೊಕ್ಕಾಗಿ ಇರುತ್ತದೆ. ಒಬ್ಬ ಸ್ನೇಹಿತನಾಗಿ ಇರುತ್ತದೆ. ನಾವು ಆನ್‌ಲೈನ್ ಬಳಕೆಗಾಗಿ ಇನ್ನೊಂದು ಅಕೌಂಟ್ ತೆರೆದು ಅದರಲ್ಲಿ ಕಡಿಮೆ ಹಣವಿಟ್ಟು ಆ ದುಡ್ಡನ್ನು ಆನ್‌ ಲೈನ್ ವ್ಯವಹಾರಗಳಿಗೆ ಬಳಸಿಕೊಳ್ಳಬಹುದು. ಇದರಿಂದ ಆನ್‌ ಲೈನ್
ವಂಚನೆಗಳಿಂದ ದೂರವಿರಬಹುದು.
errama@gmail.com

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!