Mysore
26
overcast clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಹಸುಗಳನ್ನು ನಂಬಿ ಬದುಕನ್ನು ಹಸನಾಗಿಸಿಕೊಂಡ ದಿಲೀಪ್

• ಪ್ರಶಾಂತ್ ಎಸ್.

ದುಡಿಯುವ ಛಲವಿದ್ದರೆ, ಅದಕ್ಕೆ ತಕ್ಕ ಶ್ರಮವಿದ್ದರೆ ಎಲ್ಲ ಉದ್ಯೋಗದಲ್ಲಿಯೂ ಲಾಭ ಗಳಿಸಿ ಬದುಕನ್ನು ಹಸನಾಗಿಸಿಕೊಳ್ಳಬಹುದು. ಕೃಷಿ ಭೂಮಿ ಇದ್ದರೂ ಕಡಿಮೆ ಸಂಬಳಕ್ಕಾಗಿ ನಗರಗಳತ್ತ ಮುಖ ಮಾಡುವ ಯುವಕರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಮಾಡುತ್ತಾ ಲಾಭ ಗಳಿಸಿಕೊಂಡು ಉತ್ತಮ ಜೀವನ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಗೋಪಾಲಪುರ ಗ್ರಾಮದ ಯುವ ರೈತ ದಿಲೀಪ್.

ದಿಲೀಪ್ 37 ವರ್ಷ ಪ್ರಾಯದವರು. ಇವರು ಮೈಸೂರು ತಾಲ್ಲೂಕಿನ ಗೋಪಾಲಪುರ ಗ್ರಾಮದ ನಿವಾಸಿಯಾಗಿದ್ದು, ತಮ್ಮ ಕೃಷಿ ಹೈನುಗಾರಿಕೆ ಚಟುವಟಿಕೆಗಳೊಂದಿಗೆ ಯಲ್ಲಿಯೂ ಉತ್ತಮ ಲಾಭ ಗಳಿಸುವ ಮೂಲಕ ಅದರಲ್ಲಿಯೂ ಸೈ ಅನಿಸಿಕೊಂಡಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವ ದಿಲೀಪ್, ಸ್ವಯಂ ಪ್ರೇರಿತರಾಗಿ ಹೈನುಗಾರಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ ದುಡಿಯುತ್ತಿದ್ದಾರೆ.

ದಿಲೀಪ್‌ರವರಿಗೆ 2 ಎಕರೆ 18 ಗುಂಟೆ ಜಮೀನಿದ್ದು, 2012ರಲ್ಲಿ 3 ಹಸುಗಳಿಂದ ಹೈನುಗಾರಿಕೆ ಆರಂಭಿಸಿದರು. ನಂತರ ಅವರ ತೋಟದಲ್ಲಿ 34 ಹಸುಗಳಿದ್ದವು. ನಿರ್ವಹಣೆ ತುಸು ಕಷ್ಟವಾದ್ದರಿಂದ ಪ್ರಸ್ತುತ 14 ಹಸುಗಳನ್ನು (ಎಚ್‌ಎಫ್ ಬ್ರಿಡ್) ಸಾಕುತ್ತಿದ್ದಾರೆ. ಹೆಚ್ಚು ಹಾಲಿನ ಇಳುವರಿಗಾಗಿ ನೇಪಿಯರ್ ಗ್ರಾಸ್ ಮತ್ತು ಸೂಪರ್ ಸೇಪಿಯರ್ ಆಹಾರವನ್ನು ಹಸುಗಳಿಗೆ ನೀಡುತ್ತಿದ್ದಾರೆ. ಹೈಡೋಟೊನಿಕ್ಸ್ ತಂತ್ರಜ್ಞಾನದಿಂದ ಉತ್ಪತ್ತಿಯಾದ ಮೇವನ್ನು ಹಸುಗಳಿಗೆ ನೀಡುವುದರಿಂದ ಹಸುಗಳು ಹೆಚ್ಚು ಹಾಲನ್ನು ಉತ್ಪತ್ತಿ ಮಾಡುವುದರ ಜೊತೆಗೆ ಅವುಗಳ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂಬುದು ಅವರ ಮಾತು.

ಗೋಬರ್ ಗ್ಯಾಸ್‌ ಘಟಕ: ದಿಲೀಪ್‌ ಅವರು ಜಮೀನಿನಲ್ಲಿ 5 ಸೈಲೇಜ್ ತೊಟ್ಟಿಗಳನ್ನು ನಿರ್ಮಿಸಿಕೊಂಡಿದ್ದು, ಇವು 60 ಟನ್‌ಗಳಷ್ಟು ಸಾಮರ್ಥ್ಯವುಳ್ಳ ತೊಟ್ಟಿಗಳಾಗಿವೆ. ಇಲ್ಲಿ ಉತ್ಕೃಷ್ಟಗೊಳಿಸಿದ ಮೇವನ್ನು ಹಸುಗಳಿಗೆ ನೀಡುತ್ತಾರೆ ಹಾಗೂ ಹಸುಗಳಿಂದ ಉತ್ಪತ್ತಿಯಾದ ಸಗಣಿ, ಗಂಜಲಗಳ ಸಮರ್ಥ ಬಳಕೆಗಾಗಿ ಜರ್ಮನ್ ಮಾದರಿಯ ಗೋಬರ್ ಗ್ಯಾಸ್ ಘಟಕವನ್ನೂ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಮನೆ ಅಡುಗೆಗೆ ಸ್ನಾನಕ್ಕೆ ನೀರು ಕಾಯಿಸಲು ಇದೇ ಅನಿಲವನ್ನು ಉಪಯೋಗಿಸಿ ಕೊಳ್ಳುತ್ತಿದ್ದು, ಇದರಿಂದ ತಿಂಗಳಿಗೆ 4,000 ರೂ. ಗಳನ್ನು ಉಳಿತಾಯ ಮಾಡುತ್ತಿದ್ದಾರೆ.
ಗೋಬರ್ ಗ್ಯಾಸ್ ಘಟಕದಿಂದ ಉತ್ಪತ್ತಿಯಾದ ಸರಿಯನ್ನು ಅವರೆ, ಅಲಸಂದೆ, ಶುಂಠಿ ಬೆಳೆ ಹಾಗೂ ತೆಂಗು, ಸಾಗುವನಿ, ಸಿಲ್ವರ್ ಓಕ್ ನಿರಂತರವಾಗಿ ನೀಡುತ್ತಿದ್ದಾರೆ. ಇದರಿಂದ ಭೂಮಿಯಲ್ಲಿ ಸೂಕ್ಷ್ಮಾಣು ಚಟುವಟಿಕೆ ಹೆಚ್ಚಾಗಿ ಎರೆಹುಳುಗಳ ಸಂಖ್ಯೆಯೂ ವೃದ್ಧಿಸಲಿದೆ.
ತಾವು ಬೆಳೆಯುವ ಬೆಳೆಗಳಿಗೆ ಯಾವುದೇ ರೋಗನಾಶಕ, ಕೀಟನಾಶಕ, ಕಳೆನಾಶಕ ರಾಸಾಯನಿಕಗಳನ್ನು ಬಳಸದೇ ಸಾವಯವ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿರುವ ದಿಲೀಪ್ ತಮ್ಮ ಜಮೀನಿಗೆ ಸ್ಲರಿಯನ್ನು ಆಗಾಗ್ಗೆ ಹಾಕುತ್ತಿದ್ದು, ಇದರೊಂದಿಗೆ ತೆಂಗಿನ ಗರಿಗಳು, ಹಸಿ ತ್ಯಾಜ್ಯಗಳು ಇನ್ನಿತರ ತರಗೆಲೆಗಳನ್ನು ಭೂಮಿಗೆ ಸೇರಿಸಿದಾಗ ಅವು ಬೇಗ ಕೊಳೆತು ಉತ್ಕೃಷ್ಟ ಗೊಬ್ಬರವಾಗುತ್ತದೆ.

ಜಾನುವಾರುಗಳೊಂದಿಗೆ, 150 ಕೋಳಿಗಳು, ಕುರಿ ಮತ್ತು ಮೇಕೆಗಳನ್ನೂ ಸಾಕುತ್ತಿದ್ದಾರೆ. ಅವುಗಳ ಹಿಕ್ಕೆ ಮತ್ತು ಗಂಜಲ ನೇರವಾಗಿ ಭೂಮಿಯಲ್ಲಿ ಶೇಖರವಾಗುವಂತೆ ವ್ಯವಸ್ಥೆ ಮಾಡಿದ್ದು, ಇದರಿಂದ ಫಲವತ್ತಾದ ಗೊಬ್ಬರ ಉತ್ಪಾದನೆಯಾಗುತ್ತಿದೆ. ಈ ಗೊಬ್ಬರವನ್ನೂ ತಮ್ಮ ಕೃಷಿ ಭೂಮಿಗೆ ಬಳಸಿಕೊಳ್ಳುತ್ತಿರುವ ದಿಲೀಪ್ ಇದರಿಂದಾಗಿ ಭೂಮಿಯ ಫಲವತ್ತತೆ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ.

ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ, ಕುರಿ ಗೊಬ್ಬರಗಳನ್ನು ಪುಷ್ಟಿಕರಿಸಲು ಬೆಲ್ಲ, ಹಸುವಿನ ಗಂಜಲ, ಬೇವಿನ ಎಣ್ಣೆ, ಕಡ್ಲೆ ಹಿಟ್ಟನ್ನು ಚೆನ್ನಾಗಿ ಬೆರೆಸಿ, ನೆರಳಿನಲ್ಲಿ ಬೆಳೆಯುವ ಬೆಳೆಗಳಿಗೆ ಉಪಯೋಗಿಸುತ್ತಾರೆ. ಭೂಮಿಯ ಸುತ್ತ ಬದುಗಳಲ್ಲಿ 100 ಸಾಗುವಾನಿ, ಬೀಟೆ, ಗಂಧದ ಮರಗಳನ್ನು ಬೆಳೆದಿದ್ದಾರೆ. ಇನ್ನು ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿರುವ ಇವರು ತಮಗೆ ಅಗತ್ಯವಿರುವ ತರಕಾರಿ, ಸೊಪ್ಪು ಮುಂತಾದ ಬೆಳೆಗಳನ್ನು ತಾವೇ ಬೆಳೆದುಕೊಳ್ಳುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!