ಹುಬ್ಬಳ್ಳಿ : ವಿಜಯೇಂದ್ರ ಮೂರು ವರ್ಷ ಮಾತ್ರ ರಾಜ್ಯಾಧ್ಯಕ್ಷರಾಗಿರುತ್ತಾರೆ ಎಂದು ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬಹುದಿನಗಳಿಂದ ಖಾಲಿ ಇದ್ದ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಭರ್ತಿಯಾದ ಬೆನ್ನಲ್ಲೇ ಪ್ರಹ್ಲಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ನೇಮಕವಾಗಿರುವುದು ಖುಷಿಯ ವಿಚಾರ. ಯುವಕರಿಗೆ ನಾಯಕತ್ವ ಕೊಡಬೇಕು ಎಂದು ಪಕ್ಷ ಈ ನಿರ್ಧಾರ ಮಾಡಿದೆ. ಪಕ್ಷದ ನಿರ್ಧಾರಕ್ಕೆ ಸಂಪೂರ್ಣ ಸಹಮತವಿದೆ. ಆದರೆ ವಿಜಯೇಂದ್ರ ಮೂರು ವರ್ಷ ಮಾತ್ರ ರಾಜ್ಯಾಧ್ಯಕ್ಷರಾಗಿರುತ್ತಾರೆ. ನಂತರ ಮತ್ತೊಬ್ಬ ನಿಷ್ಠಾವಂತ ಕಾರ್ಯಕರ್ತ ರಾಜ್ಯಾದ್ಯಕ್ಷರಾಗುತ್ತಾರೆ ಎಂದಿದ್ದಾರೆ.
ಇದೇ ವೇಳೆ ಸಿ.ಟಿ ರವಿ ಹಾಗೂ ಅರವಿಂದ್ ಬೆಲ್ಲದ್ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು,ಸಣ್ಣ ಪುಟ್ಟ ಅಸಮಾಧಾನಗಳಿವೆ.ಅದನ್ನು ಸರಿ ಮಾಡುತ್ತೇವೆ. ನಾನು ಅವರ ಜೊತೆ ಮಾತನಾಡುತ್ತೇನೆ. ವಿಜಯೇಂದ್ರ ಅವರಿಗೆ ನಾವೆಲ್ಲರೂ ಸಂಪೂರ್ಣ ಬೆಂಬಲ ಕೊಡುತ್ತೇವೆ,ನೂತನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದರು.





