Mysore
19
few clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಕಾವೇರಿಗಾಗಿ ಕೈಜೋಡಿಸಿದ ವಕೀಲರು

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ವಕೀಲರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಂಡ್ಯ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಸಂಘದ ಆವರಣದಿಂದ ಮೆರವಣಿಗೆ ಹೊರಟ ವಕೀಲರು ಜಯಚಾಮರಾಜೇಂದ್ರ ವೃತ್ತದಲ್ಲಿ ಕೆಲ ಕಾಲ ಪ್ರತಿಭಟಿಸಿ ಸರ್ ಎಂ ವಿ ಮೆರವಣಿಗೆ ನಡೆಸಿ ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಭಾಗಿಯಾದರು.

ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾ ನಿರತ ವಕೀಲರು ಕೆ ಆರ್ ಎಸ್ ಸೇರಿದಂತೆ ಕಾವೇರಿ ಕಣಿವೆ ಜಲಾಶಯಗಳಿಂದ ಬಿಟ್ಟಿರುವ ನೀರು ಸ್ಥಗಿತ ಮಾಡುವಂತೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಮಾತನಾಡಿ, ರೈತರ ಹಿತ ಕಾಪಾಡದೇ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕಣ್ಣು,ಕಿವಿ ಇಲ್ಲದಂತಾಗಿದೆ, ಜಲಾಶಯಗಳನ್ನ ಬರಿದು ಮಾಡಿದ್ದರೂ ನೀರು ಹರಿಸುತ್ತಿದೆ, ಮುಂದಿನ ದಿನಗಳಲ್ಲಿ ಜನತೆಗೆ ಕುಡಿಯಲು ನೀರು ಸಿಗದಂತಹ ಸಂಕಷ್ಟ ತಂದೊಡ್ಡಲಿದೆ ಎಂದರು.

ಕಾವೇರಿ ವಿಚಾರದಲ್ಲಿ ರಾಜಕಾರಣಿಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು, ದೊಂಬರಾಟ ಆಡುವುದನ್ನು ಬಿಟ್ಟು ರೈತರ ಪರ ಹೋರಾಟ ಮಾಡಿ ಎಂದರು.

ಸುಪ್ರೀಂ ಕೋರ್ಟ್ ಸೆ, 21 ರವರೆಗೆ ವಿಚಾರಣೆಯನ್ನು ಮುಂದೂಡಿದೆ, ಅಲ್ಲಿಯವರೆಗೆ ನೀರು ಬಿಡಲು ನೀರು ಎಲ್ಲಿದೆ, ಜಲಾಶಯಗಳಿಂದ ಬಿಡುಗಡೆ ಮಾಡಿರುವ ನೀರನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನದಿ ನೀರಿನ ವಿಚಾರದಲ್ಲಿ ವಾದ ಮಾಡುತ್ತಿರುವ ನ್ಯಾಯವಾದಿಗಳಿಗೆ ಸಮರ್ಪಕ ಮಾಹಿತಿ ಒದಗಿಸಲು ಸರ್ಕಾರ ಮುಂದಾಗಬೇಕು, ಸಮರ್ಪಕ ಮಾಹಿತಿ ಇಲ್ಲದೆ ವಾದ ಮಾಡಲು ಹೇಗೆ ಸಾಧ್ಯ, ಕಾವೇರಿ ಕೊಳ್ಳ ಪ್ರದೇಶದ ವಾಸ್ತವ ಪರಿಸ್ಥಿತಿ ಬಗ್ಗೆ ನ್ಯಾಯವಾದಿಗಳಿಗೆ ಮಾಹಿತಿ ಒದಗಿಸಿ ಕೊಡಿ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಕೆ ಎಲ್ ಮರಿಸ್ವಾಮಿ.ಕಾರ್ಯದರ್ಶಿ ಸಿದ್ದರಾಜು, ಜಂಟಿ ಕಾರ್ಯದರ್ಶಿ ಮಹದೇವ್, ಖಜಾಂಚಿ ಮಹೇಶ್ ನೇತೃತ್ವ ವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!