ಚಿಕ್ಕೋಡಿ : ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಎಫ್ಐಆರ್ ಮೂಲಕ ಜೈನಮುನಿಯ ಕೊಲೆ ರಹಸ್ಯ ಬಯಲಾಗಿದೆ.
ಕರೆಂಟ್ ಶಾಕ್ ನೀಡಿ ಸ್ವಾಮೀಜಿಯ ಹತ್ಯೆಗೈದ ಹಂತಕರು ಬಳಿಕ ಅವರ ದೇಹವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆದಿದ್ದರು. ಕೊಲೆ ಮಾಡಿದ್ದು ನಾರಾಯಣ ಮಾಳಿ ಮಾತ್ರ ಎಂದು ಬಿಂಬಿಸುವ ಕಾರ್ಯ ನಡೆದಿತ್ತು. ಆದರೆ ಸದ್ಯ ಹಸನ್ ಡಾಲಾಯತ್ ಹಾಗೂ ನಾರಾಯಣ ಮಾಳಿ ಇಬ್ಬರು ಸೇರಿ ಜೈನಮುನಿಯ ಹತ್ಯೆ ಮಾಡಿದ್ದಾರೆ ಎಂಬ ಸ್ಫೋಟಕ ಸುದ್ದಿ ಎಫ್ಐಆರ್ ಮೂಲಕ ಬಹಿರಂಗವಾಗಿದೆ. ಕರೆಂಟ್ ಶಾಕ್ ಕೊಟ್ಟರೂ ಸ್ವಾಮೀಜಿ ಪ್ರಾಣ ಪಕ್ಷಿ ಹಾರಿ ಹೋಗಿರಲಿಲ್ಲ. ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ ನೀಡಿದ ನಂತರ ಸ್ವಾಮೀಜಿಯ ಟವೆಲ್ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.
ಹಣ ವಾಪಸ್ ನೀಡುವಂತೆ ಪದೇ ಪದೇ ಸ್ವಾಮೀಜಿ ಪೀಡಿಸುತ್ತಿದ್ದು, ಇದರಿಂದ ಕೋಪಗೊಂಡ ನಾರಾಯಣ ಮಾಳಿ ತನ್ನ ಸ್ನೇಹಿತ ಹಸನ್ ಡಾಲಾಯತ್ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಕೋಣೆಯಲ್ಲಿ ಜೈನ ಮುನಿಗೆ ಮೊದಲು ಕರೆಂಟ್ ಶಾಕ್ ನೀಡಿ ಚಿತ್ರ ಹಿಂಸೆ ನೀಡಿದ್ದು, ಬಳಿಕ ಕೊಲೆ ಮಾಡಿ ಗೋಣಿ ಚೀಲದಲ್ಲಿ ಶವ ಸಾಗಿಸಿದ್ದಾರೆ.
ಹೀರೆಕುಡಿಯಿಂದ ಖಟಕಬಾವಿಯವರೆಗೂ ಬೈಕ್ ಮೇಲೆ ಶವ ಸಾಗಾಟ ಮಾಡಿ ಖಟಕಬಾವಿಯ ಕೊಳವೆ ಬಾವಿ ಬಳಿ ದೇಹ ಪೀಸ್ ಪೀಸ್ ಮಾಡಿದ್ದಾರೆ. ನಂತರ ಕೊಳವೆ ಬಾವಿಯಲ್ಲಿ ಶವ ಎಸೆದು ಹೋಗಿರುವ ವಿಚಾರ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.





