Mysore
27
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಬಿಸಿಸಿಐ ಆಯ್ಕೆಗಾರರಿಗೆ ಕ್ರಿಕೆಟ್ ಜ್ಞಾನವಿಲ್ಲವೆಂದ ಮಾಜಿ ಆಟಗಾರ

ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡದ ಕಳೆದೊಂದು ದಶಕದ ಐಸಿಸಿ ಟ್ರೋಫಿ ಬರದ ಬಗ್ಗೆ ಹಲವಾರು ಮಾಜಿ ಆಟಗಾರರು ಟೀಕೆ ಮಾಡುತ್ತಿದ್ದಾರೆ. ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋಲಿನ ಬಳಿಕ ಈ ಟೀಕೆಗಳು ಹೆಚ್ಚಾಗಿದೆ. ಮಾಜಿ ಆಟಗಾರ ದಿಲೀಪ್ ವೆಂಗ್ ಸರ್ಕಾರ್ ಅವರು ಟೀಂ ಇಂಡಿಯಾದ ಆಯ್ಕೆ ಸಮಿತಿಯ ವಿರುದ್ಧ ಕಿಡಿಕಾರಿದ್ದಾರೆ.

ಕೆಲವು ಆಯ್ಕೆದಾರರಿಗೆ ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ದೂರದೃಷ್ಟಿ ಅಥವಾ ಆಳವಾದ ಜ್ಞಾನವಿಲ್ಲ ಎಂದು ವೆಂಗ್ ಸರ್ಕಾರ್ ಟೀಕಿಸಿದ್ದಾರೆ.

“ದುರದೃಷ್ಟಕರ ಅಂಶವೆಂದರೆ ಕಳೆದ ಆರು-ಏಳು ವರ್ಷಗಳಿಂದ ನಾನು ನೋಡಿದ ಆಯ್ಕೆದಾರರಿಗೆ ದೂರದೃಷ್ಟಿ, ಆಟದ ಬಗ್ಗೆ ಅಥವಾ ಕ್ರಿಕೆಟ್ ಪ್ರಜ್ಞೆಯ ಬಗ್ಗೆ ಆಳವಾದ ಜ್ಞಾನವಿಲ್ಲ. ಅವರು ಶಿಖರ್ ಧವನ್ ಅವರನ್ನು ಭಾರತ ನಾಯಕನನ್ನಾಗಿ ಮಾಡಿದರು (ಶ್ರೀಲಂಕಾ ಸರಣಿಗೆ) ಅಲ್ಲಿ ನೀವು ಭವಿಷ್ಯದ ನಾಯಕನನ್ನು ಆಯ್ಕೆ ಮಾಡಿ ಅವಕಾಶ ನೀಡಬಹುದಿತ್ತು” ಎಂದು ವೆಂಗ್‌ಸರ್ಕರ್ ತಿಳಿಸಿದರು.

ಭಾರತ ತಂಡದಲ್ಲಿ ನಾಯಕನ ಸ್ಥಾನಕ್ಕೆ ಆಯ್ಕೆಗಾರರು ಯಾರನ್ನೂ ಬೆಳೆಸದಿರುವ ಬಗ್ಗೆ ವೆಂಗ್‌ಸರ್ಕರ್ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ವಿರುದ್ಧ ಕಿಡಿಕಾರಿದ ಅವರು, ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್ ಇದ್ದರೆ ಸಾಕಾಗುವುದಿಲ್ಲ ಎಂದು ಸಲಹೆ ನೀಡಿದರು.

“ನೀವು ಯಾರನ್ನೂ ಸಿದ್ದಗೊಳಿಸಿಲ್ಲ. ಸಂದರ್ಭ ಬರುವವರೆಗೆ ಕಾಯುತ್ತೀರಿ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಮಂಡಳಿ ಬಗ್ಗೆ ಮಾತನಾಡುತ್ತೀರಿ, ಬೆಂಚ್ ಸ್ಟ್ರೆಂತ್ ಎಲ್ಲಿದೆ? ಕೇವಲ ಐಪಿಎಲ್ ಅನ್ನು ಹೊಂದಿದ್ದು, ಮಾಧ್ಯಮ ಹಕ್ಕುಗಳಲ್ಲಿ ಕೋಟಿ ರೂಪಾಯಿ ಗಳಿಸಿದೆ, ಅದು ಮಾತ್ರ ಸಾಧನೆ ಆಗಬಾರದು” ಎಂದು ಅವರು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!