Mysore
23
overcast clouds

Social Media

ಶುಕ್ರವಾರ, 19 ಜೂನ್ 2026
Light
Dark

ನೀರಿನ ರಭಸಕ್ಕೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಪತ್ತೆ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾದಂತಾಗಿದೆ. ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿತ್ತು. ಇದೀಗ ಮಳೆಯ ನಡುವೆ ಹುಚ್ಚಾಟ ಮೆರೆಯಲು ಹೋದ ಯುವಕನೊಬ್ಬ ಬಲಿಯಾಗಿದ್ದು, ಬ್ಯಾಟರಾಯನಪುರದ ರಾಜಕಾಲುವೆ ಬಳಿ ಮೃತದೇಹ ಪತ್ತೆಯಾಗಿದೆ.

ನಿನ್ನೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ. ಲೋಕೇಶ್ (27) ಸಾವನ್ನಪ್ಪಿದ ಯುವಕ. ಜೋರಾದ ಗಾಳಿ ಮಳೆಯ ಸಂದರ್ಭದಲ್ಲಿ ಕೆ.ಪಿ.ಅಗ್ರಹಾರದ ರಾಜಕಾಲುವೆಗೆ ಲೋಕೇಶ್ ಇಳಿದಿದ್ದಾನೆ. ಅಲ್ಲಿದ್ದ ಸಾರ್ವಜನಿಕರು ತಡೆದರೂ, ಆಳ ನೋಡಲು ಮುಂದಾಗಿದ್ದ. ಈ ವೇಳೆ ನೀರಿನ ರಭಸಕ್ಕೆ ಲೋಕೇಶ್ ಕೊಚ್ಚಿ ಹೋಗಿದ್ದಾನೆ. ಕೂಡಲೇ ಯುವಕನ ಪತ್ತೆಕಾರ್ಯ ನಡೆಸಲಾಗಿತ್ತಾದರೂ, ಇಂದು ಬ್ಯಾಟರಾಯನಪುರದ ರಾಜಕಾಲುವೆ ಬಳಿ ಲೋಕೇಶ್ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ UDR ದಾಖಲಾಗಿದೆ.

ಬಿಬಿಎಂಪಿ ವಿರುದ್ಧ ಜನರ ಆಕ್ರೋಶ : ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ನಗರದ ಜನರು ಕಂಗಾಲಾಗಿದ್ದು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚರಂಡಿಗಳು, ರಾಜಕಾಲುವೆಗಳ ಹೂಳೆತ್ತುವ ಕೆಲಸ ಆಗಿಲ್ಲ. ಒಟ್ಟು ನಗರದ 10ಕ್ಕೂ ಹೆಚ್ಚು ಅಂಡರ್ ಪಾಸ್‌ಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ನಗರದಲ್ಲಿ 826 ಕಿ.ಮೀ ರಾಜಕಾಲುವೆ ಇದ್ದು, 400 ಕಿ.ಮಿ.ನಷ್ಟು ಮಾತ್ರ ಹೂಳೆತ್ತುವ ಕೆಲಸ ಆಗಿದೆ. ಇನ್ನೂ 427 ಕಿ.ಮೀ ಹೂಳೆತ್ತುವ ಕೆಲಸ ಬಿಬಿಎಂಪಿ ಮಾಡಿಲ್ಲ. ಚುನಾವಣೆ ನೀತಿ ಸಂಹಿತೆಯಿಂದಾಗಿ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ. ನಗರದ ಹಲವು ಕಡೆ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!