Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ʼಸಿದ್ದರಾಮಯ್ಯʼ ವಿರುದ್ಧ ಚೇತನ್‌ ಆಕ್ರೋಶ

ಬೆಂಗಳೂರು : ಸದಾ ಒಂದಲ್ಲ ಒಂದು ಹೇಳಿಕೆಯಿಂದ ವಿವಾದಕ್ಕೆ ಸಿಲುಕುತ್ತಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅವರು ಇದೀಗ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ನೂತನ ಸಚಿವ ಸತೀಶ್‌ ಜಾರಕಿಹೊಳಿಯವರನ್ನೂ ಪ್ರಶ್ನೆ ಮಾಡಿದ್ದಾರೆ.

ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಂಠೀರವ ಸ್ಟೇಡಿಯಂನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಿದ್ದರಾಮಯ್ಯ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರ ಜೊತೆ 8 ಸಚಿವರು ಪದಗ್ರಹಣ ಮಾಡಿದರು. ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್​ ಪ್ರತಿಜ್ಞಾವಿಧಿ ಬೋಧಿಸಿದರು.‌

ಈ ವೇಳೆ ಸಿದ್ದರಾಮಯ್ಯ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಕಳೆದ ಬಾರಿ ಸಿದ್ದರಾಮಯ್ಯ ಅವರು ಸತ್ಯದ ಹೆಸರಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು. ಇದೀಗ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಈ ಕುರಿತು ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಟೀಕಿಸಿದ್ದಾರೆ. ‘ವಿಚಾರವಾದಿ’ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ/ಯಾರು ದೇವರು? ದೇವರು ಎಲ್ಲಿದ್ದಾನೆ/ಳೆ/ರೆ? ಇದು ನಿರ್ದಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಅಲ್ಲದೆ, ಶಾಸಕ ಸತೀಶ ಜಾರಕಿಹೊಳಿ, ಅವರು ‘ಬುದ್ಧ-ಬಸವ-ಅಂಬೇಡ್ಕರ್’ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷವು ತನ್ನ ಸ್ವ-ಲಾಭದಾಯಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಸಮಾನತೆಯ ಐಕಾನ್ ಗಳನ್ನು ಯಾವಾಗಲೂ ಹೈಜಾಕ್ ಮಾಡಿದೆ. ಎಸ್.ಟಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಶೋಷಿತ ಎಸ್.ಟಿ ಗಳಿಗೆ ಒಳಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ..? ಅಥವಾ ಬುದ್ಧ-ಬಸವ-ಅಂಬೇಡ್ಕರ್ ಕೇವಲ ಗಿಮಿಕ್ ಮಾತ್ರವೇ.? ಎಂದು ಚೇತನ್‌ ಪ್ರಶ್ನೆ ಮಾಡಿದ್ದಾರೆ.
https://www.facebook.com/chetanahimsa/posts/23954495924149398

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!