Mysore
20
broken clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಪುಲ್ವಾಮಾ ದಾಳಿ: ಸತ್ಯಪಾಲ್ ಮಲಿಕ್ ಹೇಳಿಕೆ ಕುರಿತಂತೆ ತನಿಖೆಗೆ ಮಮತಾ ಆಗ್ರಹ

ಕೋಲ್ಕತ್ತ: ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌‍ಪಿಎಫ್‌ ಅದಕ್ಷತೆಯೇ ಕಾರಣ ಎಂಬ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿಕೆ ಕುರಿತಂತೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ;ಲ್ಲಿ ತನಿಖೆ ನಡೆಯಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಯೋಧರ ಪ್ರಯಾಣಕ್ಕೆ ವಿಮಾನವನ್ನು ಕೇಳಿದ್ದರೂ, ಗೃಹ ಸಚಿವಾಲಯ ನೀಡಿರಲಿಲ್ಲ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನನಗೆ ತಾಕೀತು ಮಾಡಿದ್ದರು ಎಂದು ಮಲಿಕ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಕೇಂದ್ರದ ವೈಫಲ್ಯದಿಂದಾಗಿ ದೇಶ ಹಲವು ಯೋಧರನ್ನು ಕಳೆದುಕೊಂಡಿದೆ ಎಂದು ಮಮತಾ ಕಿಡಿಕಾರಿದ್ದಾರೆ.

‘ಸತ್ಯಪಾಲ್‌ ಮಲಿಕ್‌ಜೀ ಹೇಳಿರುವ ವಿಷಯ ನಿಜಕ್ಕೂ ಭಯಾನಕವಾಗಿದೆ. ಕೇವಲ ಮತದಾರರ ಧೃವೀಕರಣ ಮತ್ತು ನಕಲಿ ರಾಷ್ಟ್ರೀಯವಾದ ಸೃಷ್ಟಿಗೆ ಸಿಆರ್‌ಪಿಎಫ್ ಯೋಧರ ಭದ್ರತೆಯನ್ನು ಕೇಂದ್ರ ಕಡೆಗಣಿಸಿತ್ತು ಎಂದು ಅವರು ಹೇಳಿದ್ದಾರೆ. ಪುಲ್ವಾಮಾ ದಾಳಿ ಗುಪ್ತಚರ ಸಂಸ್ಥೆಯ ವೈಫಲ್ಯ’ ಎಂದು ಮಮತಾ ಆರೋಪಿಸಿದ್ದಾರೆ.

‘2019ರಿಂದಲೂ ನಾವು ಈ ಬಗ್ಗೆ ಧ್ವನಿ ಎತ್ತುತ್ತಿದ್ದೇವೆ. ಆಗ ಸಂದರ್ಭ ದೇಶ ಮೊದಲು ಎಂಬ ದೃಷ್ಟಿಯಿಂದ ಸರ್ಕಾರದ ವಿರುದ್ಧ ನಾವು ಏನನ್ನೂ ಹೇಳಿರಲಿಲ್ಲ. ಕೊನೆಗೂ ಸತ್ಯ ಈಗ ಹೊರಬಂದಿದೆ. 2019ರಲ್ಲೂ ಬಿಜೆಪಿ ಸರ್ಕಾರವಿತ್ತು. ಕೇಂದ್ರ ಸರ್ಕಾರದ ವೈಫಲ್ಯದಿಂದ ನಾವು ಹಲವು ಸೈನಿಕರನ್ನು ಕಳೆದುಕೊಂಡೆವು’ಎಂದು ಅವರು ಟೀಕಿಸಿದ್ದಾರೆ.

‘ಈ ಪ್ರಕರಣದಲ್ಲಿ ದೊಡ್ಡ ಹುದ್ದೆಯಲ್ಲಿರುವವರ ಕೈವಾಡವಿರುವುದರಿಂದ ಸುಪ್ರೀಂ ಕೋರ್ಟ್ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ನನಗೆ ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ನಂಬಿಕೆ ಇದೆ. ನ್ಯಾಯಾಂಗ ವ್ಯವಸ್ಥೆ ಮಾತ್ರ ಈ ದೇಶವನ್ನು ಕಾಪಾಡಬಹುದು. ಪುಲ್ವಾಮಾದಲ್ಲಿ ಏನಾಯಿತು ಎಂಬ ಬಗ್ಗೆ ತನಿಖೆ ನಡೆಯಬೇಕು. ಆಗ ಮಾತ್ರ ಜನರಿಗೆ ಸತ್ಯ ತಿಳಿಯಲಿದೆ’ ಎಂದು ಅವರು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!