Mysore
22
clear sky

Social Media

ಗುರುವಾರ, 20 ಆಗಸ್ಟ್ 2026
Light
Dark

ನಾನೇ ಸ್ಟಾರ್‌ ಪ್ರಚಾರಕ : ವರ್ತೂರು ಪ್ರಕಾಶ್‍

ಕೋಲಾರ : ಮಾಜಿ ಸಚಿವ ವರ್ತೂರು ಪ್ರಕಾಶ್‍ ಅವರಿಗೆ ಕೋಲಾರ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಬುಧವಾರ ಬೆಂಬಲಿಗರು ನಗರದ ಡೂಂ ಲೈಟ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಸಂಭ್ರಮಿಸಿದರು.
ನಂತರ ಪ್ರಕಾಶ್‌, ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌ ಜೊತೆ ಕೆಇಬಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ಹಾಗೂ ಕನಕಮಂದಿರದಲ್ಲಿ ಪೂಜೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರು, ‘ಏ.17ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುವೆ. ಏ.19ರಂದು ಸಚಿವರಾದ ಮುನಿರತ್ನ ಹಾಗೂ ಡಾ.ಕೆ.ಸುಧಾಕರ್‌ ಸಮ್ಮುಖದಲ್ಲಿ ಸುಮಾರು 50 ಸಾವಿರ ಜನರನ್ನು ಸೇರಿಸಿ ಅಧಿಕೃತವಾಗಿ ನಾಮಪತ್ರ ಸಲ್ಲಿಸುವೆ’ ಎಂದರು.

‘ಕೋಲಾರ ಕ್ಷೇತ್ರಕ್ಕೆ ನಾನೇ ಸ್ಟಾರ್‌ ಪ್ರಚಾರಕ. ಬೇರೆ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡುತ್ತೇನೆ. ಮತ್ತೊಬ್ಬ ಆಕಾಂಕ್ಷಿ ಓಂಶಕ್ತಿ ಚಲಪತಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಹುಡುಕಾಟದಲ್ಲಿದೆ. ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿಯಿದೆ. ಸಿದ್ದರಾಮಯ್ಯ ಅಭ್ಯರ್ಥಿಯಾದರೆ ನನಗೆ ಇನ್ನೂ 10 ಸಾವಿರ ಹೆಚ್ಚಿಗೆ ಮತ ಬರುತ್ತವೆ’ ಎಂದರು.

ಸಂಸದ ಮುನಿಸ್ವಾಮಿ,ಕೆಯುಡಿಎ ಅಧ್ಯಕ್ಷ ವಿಜಯ್‍ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯರಾದ ರೂಪಶ್ರೀ, ಅರುಣ್‍ಪ್ರಸಾದ್, ಬಂಕ್ ಮಂಜುನಾಥ್, ಮಾಗೇರಿ ನಾರಾಯಣಸ್ವಾಮಿ ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!