Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಅನ್ನದಾತರ ಅಂಗಳ : ವಾಯು ಕೃಷಿ ಪದ್ಧತಿ ಆವಿಷ್ಕಾರ

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ‘ಹಸಿರು ಆರೋಗ್ಯ’ ಅನಾವರಣ

-ಸುತ್ತೂರು ನಂಜುಂಡ ನಾಯಕ.
ಮಣ್ಣಿನ ನೆರವಿಲ್ಲದೆ ಗಾಳಿಯಲ್ಲಿ ಕೃಷಿ ಮಾಡುವ ಪದ್ಧತಿಯನ್ನು ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಆವಿಷ್ಕಾರಗೊಳಿಸಿದ್ದಾರೆ.
ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ಕೃಷಿ ಮೇಳ ವಸ್ತು ಪ್ರದರ್ಶನದ ಆವರಣದಲ್ಲಿ ವಿಜ್ಞಾನಿ ನಿಖಿಲ್ ಅವರು ಮಣ್ಣು ಬಳಸದೆ ಗಾಳಿಯಲ್ಲಿ ತರಕಾರಿ, ಸೊಪ್ಪು ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಒಂದು ಪುಟ್ಟದಾದ ಮಳಿಗೆ ತೆರೆದು, ಕೃಷಿ ಮೇಳಕ್ಕೆ ಬರುವ ಎಲ್ಲರಿಗೂ ಮಣ್ಣು ರಹಿತ ಗಾಳಿಯಿಂದಲೇ ಬೆಳೆಯುವ ತರಕಾರಿ, ಸೊಪ್ಪು ಮತ್ತಿತರ ತೋಟಗಾರಿಕೆ ಬೆಳೆಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಿದ್ದಾರೆ.
ತರಕಾರಿಗಳು,ಸೊಪ್ಪು, ಇನ್ನಿತರ ತೋಟಗಾರಿಕೆ ಬೆಳೆಗಳನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು,ಇದಕ್ಕಾಗಿ ಅಪಾರ ಪ್ರಮಾಣದ ನೀರು ಬಳಸಿಕೊಂಡು ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣನ್ನೇ ಬಳಸದೆ ಮತ್ತು ಹೆಚ್ಚು ನೀರನ್ನೂ ಬಳಸದೆ, ಗಾಳಿಯಲ್ಲಿಯೇ ತರಕಾರಿ, ಸೊಪ್ಪು ಬೆಳೆಯಬಹುದೆಂಬುದನ್ನು ವಿಜ್ಞಾನಿಗಳು ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ. ಈ ಪದ್ಧತಿಯಿಂದ ಬೆಳೆದ ಹಸಿ ಸೊಪ್ಪನ್ನೆ ಮನುಷ್ಯ ಉಪಯೋಗಿಸಿದರೆ ಆರೋಗ್ಯಕ್ಕೂ ಹೆಚ್ಚು ಅನುಕೂಲ ಎನ್ನುತ್ತಾರೆ ವಿಜ್ಞಾನಿಗಳು.

ವಾಯು ಕೃಷಿಯಲ್ಲಿ ಅನುಸರಿಸಬೇಕಾದದ್ದು: ಕಡಿಮೆ ಪ್ರಮಾಣದ ನೀರಿನಿಂದಲೇ, ರಾಸಾಯನಿಕ ಗೊಬ್ಬರ ಬಳಸದೆ ಉತ್ತಮ ಬೆಳೆ ಪಡೆಯಬಹುದು. ಮನೆಯ ಹೊರಾಂಗಣ ಹಾಗೂ ಅಂಗಳದಲ್ಲೂ ಈ ಪದ್ಧತಿಯನ್ನು ದುಬಾರಿ ವೆಚ್ಚವಿಲ್ಲದೆ ಅನುಸರಿಸಬಹುದು.
ತರಕಾರಿ, ಸೊಪ್ಪು ಬೀಜವನ್ನು ಚಿಕ್ಕದಾದ ಪ್ಲಾಸ್ಟಿಕ್ ಚೀಲದಲ್ಲಿ 5 ಲೀಟರ್ ನೀರಿನಲ್ಲಿ 8 ದಿನ ಬೆಳೆಸಿ ನಂತರ 2 ಗುಂಟೆ ಜಾಗದಲ್ಲಿ ವಾಯು ಕೃಷಿ ಮಾಡಬಹುದು ಎನ್ನುತ್ತಾರೆ ವಿಜ್ಞಾನಿ ನಿಖಿಲ್.
ಇದೇ ರೀತಿ ಮತ್ತೊಂದು ಚಿಕ್ಕ ಮಳಿಗೆಯಲ್ಲಿ ಮೊಳಕೆ ಕಟ್ಟಿದ ಕಾಳುಗಳಿಂದ ಸಸಿ ಮಾಡಿ ತಯಾರಿಸಿದ್ದು, ಈ ಒಂದು ಸಸಿ ಮಡಿಯಿಂದ ಮೊಳಕೆ ಬಂದ 15 ದಿನದ ಸೊಪ್ಪನ್ನು ಹಸಿಹಸಿಯಾಗಿ ಉಪಯೋಗಿಸಿದರೆ ತುಂಬಾ ಆರೋಗ್ಯದಾಯಕ ಎನ್ನುತ್ತಾರೆ ವಿಜ್ಞಾನಿಗಳು.
ಕಾಳುಗಳನ್ನು ಮೊಳಕೆ ಕಟ್ಟಿ ಉಪಯೋಗಿಸಲಾಗುವ ಪದ್ಧತಿ ಹೊಸದೇನಲ್ಲ, ಈಗ ಮೊಳಕೆಯ ಸೊಪ್ಪನ್ನು ಉಪಯೋಗಿಸಿದರೆ ಮನುಷ್ಯನ ಆರೋಗ್ಯಕ್ಕೆ ಬಹಳ ಅನುಕೂಲ, ಮನೆಯವರು ತಮ್ಮ ಕಿಟಕಿ ಬಾಗಿಲುಗಳಲ್ಲಿ ಯಾವುದಾದರೂ ಸಣ್ಣದೊಂದು ತರಕಾರಿ ವೇಸ್ಟ್‌ಕಾಂಪೋಸ್ಟ್ ಮಾಡಿ ಗೊಬ್ಬರ ತಯಾರಿಸಿ ಮೊಳಕೆ ಕಾಳನ್ನು ಕಟ್ಟಿ ಮೊಳಕೆ ಬರುವ ಸೊಪ್ಪನ್ನು ಉಪಯೋಗಿಸಿಕೊಳ್ಳುವ ವಿಧಾನಗಳ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡುತ್ತಿದ್ದು, ಸಾರ್ವಜನಿಕರು ಈ ಆವಿಷ್ಕಾರದ ಬಗ್ಗೆ ಕೇಳಿ ಚಕಿತಗೊಳ್ಳುತ್ತಿದ್ದಾರೆ.
ಗೃಹಿಣಿಯರು ಹಾಗೂ ಮಕ್ಕಳೂ ಸಹ ಈ ಪದ್ಧತಿಯಿಂದ ಮನೆಯಲ್ಲಿ ಒಂದು ಕುಟುಂಬಕ್ಕೆ ಅಗತ್ಯವಿರುವ ವಿವಿಧ ಬಗೆಯ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆದುಕೊಳ್ಳಬಹುದು ಎನ್ನುತ್ತಾರೆ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು.

ವಾಯು ಕೃಷಿಯಲ್ಲಿ ಬೆಳೆದ ಸ್ವಚ್ಛ ಹಸಿರಿನಿಂದ ಕೂಡಿರುವ ತಾಜಾ ಸೊಪ್ಪು, ತರಕಾರಿಗಳನ್ನು ಸ್ಥಳದಲ್ಲೇ ವಾರಾಟಕ್ಕೆ ಸಿದ್ಧಪಡಿಸಿದ್ದಾರೆ. ವಾಯು ಕೃಷಿ ಪದ್ಧತಿಯನ್ನು ತಾವೂ ಸಹ ಅಳವಡಿಸಿಕೊಳ್ಳಬೇಕೆನ್ನುವ ರೈತ ಬಂಧುಗಳು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳಾದ ನಿಖಿಲ್, ಮೊಬೈಲ್ ಸಂಖ್ಯೆ- ೮೯ ೫೧ ೬೭ ೭೬ ೭೨. ಈ ಮೂಲಕ ಹೆಚ್ಚಿನ ಮಾಹಿತಿ ಪಡೆಯಲು ಕೋರಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!