Mysore
30
overcast clouds

Social Media

ಭಾನುವಾರ, 21 ಜೂನ್ 2026
Light
Dark

ಭೋಗಯ್ಯನಹುಂಡಿ ಕೆರೆ ಜೀರ್ಣೋದ್ಧಾರಕ

ಸ್ವಂತ ಅರ್ಧ ಕೋಟಿ ರೂ. ಖರ್ಚಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸದಾನಂದರಿಂದ ಮಾದರಿ  ಸೇವಾ ಕಾರ್ಯ

ಶ್ರೀಧರ್ ಆರ್.ಭಟ್
ನಂಜನಗೂಡು: ಹಣ ಸಂಪಾದನೆಯೊಂದೇ ಜೀವನದ ಪ್ರಮುಖ ಧ್ಯೇಯ ಎಂಬಂತಾಗಿರುವ ಈ ಕಾಲ ಘಟ್ಟದಲ್ಲೂ ಇಲ್ಲೊಬ್ಬರು ಹೂಳು ತುಂಬಿಕೊಂಡು, ಕಾಣದಂತಾದ ಕೆರೆಯ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸರ್ಕಾರದಿಂದ ಅಥವಾ ವಿವಿಧ ಎನ್‌ಜಿಓಗಳಿಂದ ಬರಬಹುದಾದ ಹಣದಲ್ಲಿ ನೆಪ ಮಾತ್ರಕ್ಕೆ ಕಾಮಗಾರಿ ಮಾಡಿಸಿ ಅದರಲ್ಲಿ ತಮ್ಮ ಪಾಲೆಷ್ಟು ಎಂದು ಕೇಳುವ ಈ ಕಾಲದಲ್ಲೂ ಸ್ವಂತ ಹಣದಿಂದ ಕೆರೆ ಪುನರ್ ನಿರ್ಮಾಣ ಮಾಡುತ್ತಿರುವವರನ್ನು ನೋಡಲು ನೀವು ನಂಜನಗೂಡು ತಾಲ್ಲೂಕಿನ ಭೋಗಯ್ಯನ ಹುಂಡಿಗೆ ಆಗಮಿಸಬೇಕು.

50 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಪುನರ್ ನಿರ್ಮಾಣ : ಸುಮಾರು 7 ಎಕರೆ ವಿಸ್ತೀರ್ಣದ ಮಧ್ಯದಲ್ಲಿ ಐದಾರು ಬೃಹತ್ ಆಲದ ಮರಗಳಿರುವ ಇಲ್ಲಿನ ಪುರಾತನವಾದ ರುದ್ರಪ್ಪನ ಕೆರೆಯ ಪುನರ್ ನಿರ್ಮಾಣ ಈಗ ಭರದಿಂದ ಸಾಗಿದೆ.
ಇಂಥ ಜನೋಪಯೋಗಿ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿರುವವರು ಇದೇ ಕ್ಷೇತ್ರದ ತಗಡೂರು ಜಿಲ್ಲಾ ಪಂಚಾಯಿತಿಯ ನಿರ್ಗಮಿತ ಸದಸ್ಯ ಸದಾನಂದ.
ಈ ಪ್ರದೇಶ ಹೇಳಿ ಕೇಳಿ ತಾಲ್ಲೂಕಿನ ಖಾಯಂ ಬರಪೀಡಿತ ಪ್ರದೇಶ. ಅಂತರ್ಜಲ ಇಲ್ಲಿ ಕನಸೇ ಆಗಿದೆ. ಹತ್ತಾರು ವರ್ಷಗಳಿಗೆ ಒಮ್ಮೆ ಮಳೆ ಬಂದರೆ ಅದೇ ಪುಣ್ಯ ಎನ್ನುವ ಈ ಭೋಗಯ್ಯನಹುಂಡಿ ಈ ಕೆರೆಯ ಪುನರ್ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಅಹವಾಲು ಸಲ್ಲಿಸಿ 85 ಲಕ್ಷ ರೂ. ಅಂದಾಜು ಪಟ್ಟಿ ಸಿದ್ಧವಾಗಿಯೂ ಅದಕ್ಕೆ ಅನುಮತಿ ದೊರೆಯದೇ ಇದ್ದುದರಿಂದ ಹತಾಶರಾದ ಸದಾನಂದ ಈಗ ತಾವೇ ಮುಂದಾಗಿ ಕಾಮಗಾರಿ ಮಾಡಿ ಕೆರೆಗೆ ಕಾಯಕಲ್ಪ ನೀಡಲು ಸಂಕಲ್ಪ ಮಾಡಿದ ಸದಾನಂದ 15 ದಿನಗಳಿಂದ ಕೆರೆ ಕಾಮಗಾರಿ ಆರಂಭಿಸಿದ್ದಾರೆ.
ಪ್ರತಿನಿತ್ಯ ಲಕ್ಷಾಂತರ ರೂ. ಖರ್ಚಾಗುತ್ತಿರುವ ಈ ಕೆರೆಯ ಕಾಮಗಾರಿಯು ನೇರ ಉಸ್ತುವಾರಿ ಸಹ ಇವರದ್ದೇ ಆಗಿದೆ. ಗ್ರಾಮಸ್ಥರೊಂದಿಗೆ ಸ್ಥಳದಲ್ಲೇ ನಿಂತು ಕೆಲಸ ಮಾಡಿಸುತ್ತಿದ್ದಾರೆ.
ಇವರು ಜಿಪಂ ಸದಸ್ಯರಾದ ನಂತರ ಕ್ಷೇತ್ರದ ಕಾರ್ಯ, ಕಾಮಳ್ಳಿ, ಕಾರಾಪುರ ಹಾಗೂ ಅಳಂಗಂಚಿ ಕೆರೆಗಳಿಗೆ ಕಾಯಕಲ್ಪ ನೀಡಿ, ಈಗ 50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಹಣದಿಂದ ಕೆರೆ ಕಾಮಗಾರಿ ಕೈಗೊಂಡಿದ್ದಾರೆ.

ಎರಡು ಜಿಲ್ಲೆಗಳಿಗೆ ಸೇರಿದ ಕೆರೆ
ಎರಡು ಜಿಲ್ಲೆ, ಎರಡು ತಾಲ್ಲೂಕುಗಳಿಗೆ ಸೇರಿದ ಈ ಕೆರೆಯ ಅರ್ಧ ಭಾಗ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ನವಿಲೂರು ಪಂಚಾಯಿತಿಗೆ ಸೇರಿದರೆ ಉಳಿದ ಅರ್ಧ ಭಾಗ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ.


ವೆಚ್ಚ ಎಷ್ಟಾದರೂ ಸರಿ, ಕೆರೆಯ ಕಾಮಗಾರಿ ಪೂರ್ಣಗೊಳಿಸಿಕೊಡುತ್ತೇನೆ. ನಂತರವಾದರೂ ಇಲ್ಲಿನ ಶಾಸಕರಾದವರು ಮುತುವರ್ಜಿ ವಹಿಸಿ ಈ ಕೆರೆಯನ್ನು ಕಪಿಲಾ ನದಿಯ ನೀರು ತುಂಬುವ ಯೋಜನೆಗೆ ಸೇರಿಸಿ ಈ ಕೆರೆಗೆ ನೀರು ಹರಿಸಲಿ.
-ಸದಾನಂದ


ಮಳೆ ಇಲ್ಲ, ಬೆಳೆ ಇಲ್ಲ. ಕೊಳವೆ ಬಾವಿ ತೋಡಿದರೂ ನೀರು ಮರೀಚಿಕೆಯಾಗುವ ಈ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಮಳೆ ಬಂದರೂ ಬಿತ್ತುವ ಹುರುಳಿ ಸಾರಂಗ, ಜಿಂಕೆಗಳ ಪಾಲಾಗುತ್ತಿದೆ. ಈ ಕರೆ ಪುನರ್ ನಿರ್ಮಾಣಗೊಂಡು ಅದಕ್ಕೆ ನದಿ ನೀರು ಹರಿದರೆ ಇಲ್ಲಿನ ನೂರಾರು ಎಕರೆ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಅದರ ಶ್ರೇಯಸ್ಸು ಸದಾನಂದ ಅವರದ್ದಾಗಲಿದೆ.
-ಬಸವಣ್ಣ, ಸ್ಥಳೀಯರು.


ಸಿದ್ದರಾಮಯ್ಯನವರು ಇಲ್ಲಿನ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಬಂದಿದ್ದಾಗ ಗ್ರಾಮಸ್ಥರೆಲ್ಲ ಸೇರಿ ಈ ಕೆರೆ ಅಭಿವೃದ್ಧಿಗಾಗಿ ಮನವಿ ನೀಡಿದ್ದೆವು. ಆದರೆ ಈವರೆಗೂ ಅಭಿವೃದ್ಧಿಯಾಗಿಲ್ಲ. ಈಗ ಸದಾನಂದರು ಸ್ವಂತ ಹಣದಿಂದ ಕೆರೆ ಅಭಿವೃದ್ಧಿ ಕೈಗೊಂಡಿದ್ದಾರೆ. ನದಿ ನೀರು ಬಂದರೆ ಮಾತ್ರ ಸದಾನಂದರ ಕನಸು ನನಸಾಗಲು ಸಾಧ್ಯ. ಹಾಗಾಗಲಿ ಎಂಬುದೇ ಈ ಪುಟ್ಟ ಗ್ರಾಮದ ಜನತೆಯ ಆಶಯ.
-ನಾಗರಾಜ, ಸ್ಥಳೀಯರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!