ಗುಂಡ್ಲುಪೇಟೆ: ಬೈಕ್ ಓವರ್ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಕಾರಿಗೆ ಈಚರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಆರು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ರಾಘವಪುರದ ಗ್ರಾಮ ಪಂಚಾಯತಿ ಮುಂಭಾಗ ಬುಧವಾರ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ.
ವಿಜಯಪುರದ ಕಡೆಯ ಕಾರು ಇದಾಗಿದ್ದು, ಕಾರಿನಲ್ಲಿದ್ದವರು ಶಬರಿಮಲೆ ಯಾತ್ರೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ. ಅವರನ್ನು ದೊರೆಯಪ್ಪ, ಶಶಿ ಬಡಿಗೆರೆ, ಪ್ರಭು ಬಡಿಗೆರೆ, ಬಸಪ್ಪ ಎಂದು ಗುರುತಿಸಲಾಗಿದೆ.
ಗುಂಡ್ಲುಪೇಟೆಯಿಂದ ನಂಜನಗೂಡು ಕಡೆಗೆ ಹೊರಟಿದ್ದ ಈಚರ್ ವಾಹನವು ಬೈಕ್ ವೊಂದನ್ನು ಹಿಂದಿಕ್ಕಲು ಹೋಗಿ ಮೈಸೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೆಲ್ಲಾ ಗಾಯಗೊಂಡಿದ್ದು, ಅವರನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.