Mysore
22
broken clouds

Social Media

ಬುಧವಾರ, 12 ಆಗಸ್ಟ್ 2026
Light
Dark

ವರನಟ ಡಾ. ರಾಜ್‌ ಕುಟುಂಬಸ್ಥರು ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ 

ಹನೂರು: ವರನಟ ಡಾ. ರಾಜಕುಮಾರ್‌ ಅವರ ಹುಟ್ಟೂರು ಹನೂರು ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮ ಇಡೀ ಕರ್ನಾಟಕಕ್ಕೆ ಪರಿಚಿತ. ಮಂಗಳವಾರ ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕ ರತ್ನ ದಿ. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಕುಟುಂಬದವರು ಇಲ್ಲಿನ ಬೂದುಬಾಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಗುಡಿಹಟ್ಟಿ ವೆಂಕಟರಮಣ ಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಬೂದುಬಾಳು ವೆಂಕಟರಮಣ ಸ್ವಾಮಿ ದೇವಾಲಯಕ್ಕೂ ಡಾ. ರಾಜಕುಮಾರ್ ಹಾಗೂ ತಂದೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಕಾಲದಿಂದಲೂ ಅವಿನಾವಭಾವ ಸಂಬಂಧವಿದೆ. ವೆಂಕಟರಮಣ ಸ್ವಾಮಿಯು ಮನೆ ದೇವರಾಗಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

ಡಾ.ರಾಜ್ ಕುಮಾರ್ ಆದಿಯಾಗಿ ಸಂಪ್ರದಾಯದಂತೆ ಆಗಾಗ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಅಂತೆಯೇ ಪುನೀತ್ ರಾಜ್ ಕುಮಾರ್ ನಿಧನದ ಒಂದು ವರ್ಷದ ಬಳಿಕ ಕುಟುಂಬದವರು ಒಟ್ಟುಗೂಡಿ ಮನೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ದೊಡ್ಮನೆ ಕುಟುಂಬವನ್ನು ಕಣ್ತುಂಬಿಕೊಳ್ಳಲು ನೂಕುನುಗ್ಗಲು
ದೊಡ್ಮನೆ ಕುಟುಂಬ ಬೂದುಬಾಳು ಗ್ರಾಮಕ್ಕೆ ಆಗಮಿಸಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಹನೂರು, ಮಂಗಲ, ಬಿ.ಗುಂಡಾಪುರ, ಕಾಮಗೆರೆ, ಕಣ್ಣೂರು, ಸಿಂಗನಲ್ಲೂರು, ದೊಡ್ಡಿಂದುವಾಡಿ ಗ್ರಾಮಗಳ ಜನತೆ ದೇವಾಲಯದ ಮುಂದೆ ಜಮಾಯಿಸಿದರು. ಪೂಜೆ ಮುಗಿಸಿ ಹೊರ ಬರುತ್ತಿದ್ದಂತೆ ದೊಡ್ಮನೆ ಕುಟುಂಬವನ್ನು ನೋಡಲು ಸಾರ್ವಜನಿಕರು ಮುಗಿಬಿದ್ದರು. ಯುವಕರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಮಹಿಳೆಯರು ಪುನೀತ್ ಅವರನ್ನು ನೆನೆದು ಪತ್ನಿ ಅಶ್ವಿನಿ ಮತ್ತು ಮಕ್ಕಳನ್ನು ವಿನಮ್ರತೆಯಿಂದಲೇ ನೋಡುತ್ತಾ ಕೈಬೀಸುತ್ತಿದ್ದುದು ಕಂಡು ಬಂದಿತು.

ಈ ವೇಳೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ ಮಂಗಳ, ಮಕ್ಕಳಾದ ವಿನಯ್ ರಾಜಕುಮಾರ್, ಯುವರಾಜ್ ಕುಮಾರ್, ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಮಕ್ಕಳಾದ ದೃತಿ, ವಂದಿತಾ, ಸಂಗಡಿಗರು, ಅಶ್ವಿನಿ ಪುನೀತ್ ರಾಜ್ ಕುಮಾರ್ ಸಹೋದರ ವಿನಯ್, ನರಹಂತಕ ವೀರಪ್ಪನ್ ನಿಂದ ಡಾ.ರಾಜಕುಮಾರ್ ಅವರ ಜೊತೆ ಅಪಹರಣಕ್ಕೊಳಗಾಗಿದ್ದ ನಾಗೇಶ್, ಪುನೀತ್ ರಾಜಕುಮಾರ್ ಅವರ ಕಾರು ಚಾಲಕ, ಸ್ಥಳೀಯರಾದ ಸಿಂಗನಲ್ಲೂರು ಶ್ರೀನಿವಾಸ್ ಉಪಸ್ಥಿತರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!