Mysore
23
overcast clouds

Social Media

ಬುಧವಾರ, 05 ಆಗಸ್ಟ್ 2026
Light
Dark

ಮಂಗಳೂರು ಸ್ಛೋಟ ಪ್ರಕರಣ: ಹೊಣೆ ಹೊತ್ತ ಐಆರ್‌ಸಿ

ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್ ಆಗಿತ್ತು: ಉಗ್ರ ಸಂಘಟನೆ

ಮಂಗಳೂರು: ಮಂಗಳೂರಿನ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಛೋಟ ಪ್ರಕರಣದ ಹೊಣೆಯನ್ನು ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ (ಐಆರ್‌ಸಿ) ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಕದ್ರಿ ದೇವಸ್ಥಾನ ನಮ್ಮ ಗುರಿಯಾಗಿತ್ತು ಎಂದು ಹೇಳಿದೆ.
ಶಾರಿಖ್ ಪಂಪ್‌ವೆಲ್ ಬಳಿ ಬಾಂಬ್ ಸ್ಛೋಟ ನಡೆಸಲು ಪ್ಲ್ಯಾನ್ ನಡೆಸಿದ್ದ ಎಂಬ ಮಾಹಿತಿ ಆರಂಭದಲ್ಲಿ ಸಿಕ್ಕಿತ್ತು. ಆದರೆ, ಈಗ ಕದ್ರಿ ದೇವಸ್ಥಾನ ಟಾರ್ಗೆಟ್ ಆಗಿದ್ದರಿಂದ ಈ ಪ್ರಕರಣ ಈಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಕದ್ರಿಯಲ್ಲಿರುವ ಮಂಜುನಾಥ ದೇವಸ್ಥಾನ ೧೦ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಮಂಗಳೂರಿನ ಪ್ರಸಿದ್ಧ ದೇವಸ್ಥಾನವಾಗಿದೆ.
ಈ ಕುರಿತು ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ನಡುವೆ ಕೆಲ ವಿಚಾರಗಳ ಕುರಿತಂತೆ ಉಗ್ರ ಸಂಘಟನೆ ಪೋಸ್ಟ್‌ನಲ್ಲಿ ಹೇಳಿದ್ದು, ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ ಉಗ್ರ ಸಂಘಟನೆ ಪೋಸ್ಟ್ ಹಂಚಿಕೊಂಡಿದ್ದು, ಮೂಲವಾಗಿ ಕದ್ರಿ ದೇವಸ್ಥಾನದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಉದ್ದೇಶಿತ ಗುರಿ ತಲುಪುವ ಮೊದಲೇ ಬಾಂಬ್ ಸ್ಛೋಟಗೊಂಡಿದೆ ಎಂದು ಸಂಘಟನೆ ಹೇಳಿರುವುದು ಪೋಸ್ಟ್‌ನಲ್ಲಿ ಕಂಡು ಬಂದಿದೆ. ನ.೨೩ರಂದು ಪ್ರಕಟಿಸಲಾಗಿರುವ ಪೋಸ್ಟ್ ಜೊತೆ ಬಾಂಬ್ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಖ್‌ನ ಎರಡು ಫೋಟೋಗಳನ್ನೂ ಕೂಡ ಅಪ್‌ಲೋಡ್ ಮಾಡಲಾಗಿದೆ. ಅಲ್ಲದೇ, ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಹಾಕಿರುವುದು ಕಂಡು ಬಂದಿದೆ.
ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳು ಮತ್ತು ಧರ್ಮದಲ್ಲಿ ಹಸ್ತಕ್ಷೇಪ ನಡೆಸುವ ಮೂಲಕ ನಮ್ಮ ಮೇಲೆ ಯುದ್ಧ ಸಾರಲಾಗಿದೆ. ಈ ಯುದ್ಧಕ್ಕೆ ಪ್ರತಿಯಾಗಿ ದಾಳಿ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದೆ.
ಮಂಗಳೂರಿನ ಪ್ರಮುಖ ಹಿಂದೂ ದೇವಾಲಯಗಳಾದ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ, ಕುದ್ರೋಳಿ ಗೋಕರ್ಣನಾಥಸ್ವಾಮಿ ಹಾಗೂ ಮಂಗಳಾದೇವಿ ದೇವಾಲಯ, ಮಣ್ಣಗುಡ್ಡೆಯಲ್ಲಿರುವ ಸಂಗನಿಕೇತನ ಈತನ ಟಾರ್ಗೆಟ್ ಆಗಿತ್ತು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಲಕ್ಷದಿಪೋತ್ಸವ ಸಂದರ್ಭದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರಿಖ್ ಮೊಹಮ್ಮದ್ ಹೊಂಚು ಹಾಕಿದ್ದ. ಜೊತೆಗೆ ಮಂಗಳೂರಿನ ಪಡಿಲು ಬಳಿ ಇರುವ ರೈಲ್ವೆ ನಿಲ್ದಾಣ, ಬಸ್ ಮತ್ತು ವಿಮಾನ ನಿಲ್ದಾಣಗಳನ್ನು ಕೂಡ ಈತ ಟಾರ್ಗೆಟ್ ಮಾಡಿದ್ದ ಎನ್ನಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!