Mysore
21
overcast clouds

Social Media

ಬುಧವಾರ, 01 ಜುಲೈ 2026
Light
Dark

ಆಯ್ದ ಮಾಧ್ಯಮಗಳಿಗೆ ದೀಪಾವಳಿ ಉಡುಗೊರೆ ತನಿಖೆಯಾಗಲಿ: ಎಚ್.ವಿಶ್ವನಾಥ್

ಮೈಸೂರು: ದೀಪಾವಳಿ ಉಡುಗೊರೆ ಹೆಸರಿನಲ್ಲಿ ಆಯ್ದ ಮಾಧ್ಯಮಗಳಿಗೆ ಸ್ವೀಟ್ ಬಾಕ್ಸ್ ಜತೆಗೆ ಹಣ ನೀಡಿಕೆ ಪ್ರಕರಣಕ್ಕೆ ಸಂಬಂಧಿಸಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೌನ ಮುರಿದು ಪ್ರಕರಣದ ತನಿಖೆ ಮಾಡಿಸಿ, ತಮ್ಮ ಕಚೇರಿಯಲ್ಲಿರುವ ಮಾಧ್ಯಮ ಕಾರ್ಯದರ್ಶಿಯನ್ನು ಹೊರ ಹಾಕಬೇಕು ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಸರ್ಕಾರ ಮಾತ್ರವಲ್ಲ. ಇಡೀ ವ್ಯವಸ್ಥೆಯಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಇದರಲ್ಲಿ ನಾವು-ನೀವು ಇಬ್ಬರೂ ಸೇರಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನತಂತ್ರ ವ್ಯವಸ್ಥೆಯಲ್ಲಿ ಮಾಧ್ಯಮ ಪ್ರಮುಖ ಅಂಗ. ಅದಕ್ಕೇ ಉಡುಗೊರೆ ಹೆಸರಿನಲ್ಲಿ ಹಣ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ಪ್ರಕರಣದ ಮೂಲಕ ಜನ ಸಮುದಾಯದ ಮುಂದೆ ಮಾಧ್ಯಮದ ಗೌರವ ಮತ್ತು ಅದಕ್ಕಿರುವ ಶಕ್ತಿಯನ್ನು ಕಳೆಯಲು ಹೊರಟಿದ್ದೇವೆ ಅನಿಸುತ್ತದೆ. ಕರ್ನಾಟಕದಲ್ಲಿ ಮಾಧ್ಯಮ ರಂಗಕ್ಕೆ ತನ್ನದೇ ಆದ ಪರಂಪರೆ ಇದೆ. ವಾಚ್-ಸ್ಕಾಚ್-ಕ್ಯಾಶ್-ಗೋಲ್ಡ್ ಕೊಟ್ಟು ಮಾಧ್ಯಮದ ವಿಶ್ವಾಸ ಮತ್ತು ಗೌರವ ಕಳೆಯಲು ಹೊರಟರೆ ನಾವು ಹುಡುಕುವುದಾದರೂ ಏನು? ಸಂವಿಧಾನದ ನಾಲ್ಕನೇ ಅಂಗ ಅನ್ನುವ ಮಾಧ್ಯಮವನ್ನು ನಾವು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ? ಮಾಧ್ಯಮವೇ ಸತ್ವ ಕಳೆದುಕೊಂಡರೆ ಉಳಿಯುವುದಾದರೂ ಏನು ಎಂದರು.

ಆಯ್ದ ಮಾಧ್ಯಮ, ವ್ಯಕ್ತಿಗಳಿಗೆ ಹಣ ನೀಡಲಾಗಿದೆ ಎಂದರೆ ಯಾರವರು? ಅವರೆಷ್ಟು ದೊಡ್ಡವರು ಎಂದು ಪ್ರಶ್ನಿಸಿದ ಅವರು, ಮಾಧ್ಯಮ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಛಾಟಿ ಬೀಸಬೇಕಿತ್ತು. ಉಡುಗೊರೆಯನ್ನು ಒಂದಿಬ್ಬರು ವಾಪಸ್ ನೀಡಿ ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದಾರೆ ಅನ್ನುವುದಾದರೆ ಉಳಿದವರು ಒಪ್ಪಿಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

ಈ ವಿಷಯದಲ್ಲಿ ಸಮಾಜದಲ್ಲಿ ಚರ್ಚೆಯಾಗಬೇಕು. ಮಾಧ್ಯಮವೇ ಅದಕ್ಕೆ ವೇದಿಕೆ ಕಲ್ಪಿಸಬೇಕು.ಆ ಮೂಲಕ ಮಾಧ್ಯಮ ಜನರ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು. ಇದೊಂದು ರೀತಿ ೨ನೇ ತರಗತಿಯ ತೋಳ-ಕುರಿ ಮರಿ ಕಥೆಯಂತಾಗಿದೆ. ಕೂಡಲೇ ಮುಖ್ಯಮಂತ್ರಿ ಈ ಪ್ರಕರಣದ ತನಿಖೆ ಮಾಡಿಸಬೇಕು. ಇಲ್ಲವಾದರೆ ಜನರಿಗೆ ಸರ್ಕಾರದ ಮೇಲಿನ ವಿಶ್ವಾಸ ಹೋಗುತ್ತೆ ಎಂದು ಹೇಳಿದರು.

ಗೇಟ್ ಪಾಸ್ ತೋರಿಸಿ

ಆರೋಗ್ಯ ಮಂತ್ರಿಯೋ ಅನಾರೋಗ್ಯ ಮಂತ್ರಿಯೋ ಅಂಥವರನ್ನು ಸಂಪುಟದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಏಕೆ ಹೆಸರು ಹಾಳು ಮಾಡಿಕೊಳ್ಳಬೇಕು. ಜನ-ಸರ್ಕಾರಕ್ಕಿಂತ ಮಂತ್ರಿ ದೊಡ್ಡವನಲ್ಲ ಎನ್ನುವ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

 

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!